ಸೀಡಿ ತಡೆಯಾಜ್ಞೆ ತಂದವರಿಗೆ ಟಿಕೆಟ್ ಕೊಟ್ಟಿದ್ದು ಯಾವ ಐಡಿಯಾಲಾಜಿ?: ಬಿಜೆಪಿ ನಾಯಕರ ವಿರುದ್ಧ ಶೆಟ್ಟರ್ ವಾಗ್ದಾಳಿ
''ಕೆಜೆಪಿ ಕಟ್ಟಿದ್ದಾಗ ಯಡಿಯೂರಪ್ಪನವರ ಸಿದ್ಧಾಂತ ಎಲ್ಲಿ ಹೋಗಿತ್ತು?''
ಹುಬ್ಬಳ್ಳಿ: ಐಡಿಯಾಲಾಜಿ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕ್ರಿಮಿನಲ್ ಗಳಿಗೆ ಯಾಕೆ ಟಿಕೆಟ್ ಕೊಟ್ಟಿದ್ದು ಯಾಕೆ? ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ''ಆರರಿಂದ ಏಳು ಜನ ಸೀಡಿ ತಡೆಯಾಜ್ಞೆ ತಂದವರಿಗೆ ಟಿಕೆಟ್ ಕೊಟ್ಟಿದ್ದು ಯಾವ ಐಡಿಯಾಲಾಜಿ? ಮಣಿಕಠ ರಾಠೋಡ ಎಂಬಾತನ ವಿರುದ್ಧ 80 ಕೇಸ್ ಗಳಿವೆ. ಆತನಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಐಡಿಯಾಲಾಜಿ ಉಳಿದಿಲ್ಲ'' ಎಂದು ಕಿಡಿಕಾರಿದರು.
''ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದಾಗ ಸಿದ್ಧಾಂತ ಎಲ್ಲಿ ಹೋಗಿತ್ತು.? ನಾನು ಪಕ್ಷ ದ್ರೋಹದ ಕೆಲಸ ಮಾಡಿಲ್ಲ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷದಲ್ಲಿ ನನ್ನ ವಿರುದ್ಧ ಕುತಂತ್ರ, ಷಡ್ಯಂತ್ರ ನಡೆದಿದೆ. ಯಡಿಯೂರಪ್ಪರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬೈಗುಳ, ಟೀಕೆಯನ್ನು ಅಶೀವಾರ್ದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ' ಎಂದು ಹೇಳಿದರು.
'ಬಿಜೆಪಿ ನನ್ನನ್ನು ಸೋಲಿಸುವ ಅಭಿಯಾನ ನಡೆಸುತ್ತಿದೆ. ಬಡಪಾಯಿ ಮೇಲೆ ಯಾಕೆ ಮುಗಿ ಬೀಳುತ್ತಿದ್ದಾರೋ ಗೊತ್ತಿಲ್ಲ..? ಆಯನೂರ ಮಂಜುನಾಥ್, ಲಕ್ಷ್ಮಣ ಸವದಿ, ಎನ್.ಆರ್.ಸಂತೋಷ್ ಸೇರಿದಂತೆ ಹಲವರು ಪಕ್ಷ ತೋರೆದಿದ್ದಾರೆ. ಆದರೆ ನಾನು ಪಕ್ಷ ತೊರೆದಿದ್ದನ್ನು ದೊಡ್ಡ ಅಪರಾಧ ಮಾಡಿದವನಂತೆ ಮುಗಿಬಿದ್ದಿದ್ದಾರೆ' ಎಂದು ಹೇಳಿದರು.