×
Ad

ನಮ್ಮ ಬಳಿಗೆ ಬಂದು ಮಂತ್ರಿ ಪದವಿ ಕೇಳಿದ್ದ ಯಡಿಯೂರಪ್ಪ, ಶೆಟ್ಟರ್ ಮುಗಿಸಲು ಹೊರಟಿರುವುದು ಹಾಸ್ಯಾಸ್ಪದ: ಕುಮಾರಸ್ವಾಮಿ

''ಬುಲ್ಡೋಜರ್ ಯೋಗಿಯಿಂದ ರಾಜ್ಯದ ಜನರಿಗೆ ಏನು ಉಪಯೋಜನ?''

Update: 2023-04-27 20:32 IST

ತುಮಕೂರು: ಜಗದೀಶ್ ಶೆಟ್ಟರ್ ಮುಗಿಸಲು ಯಡಿಯೂರಪ್ಪ ಹೊರಟಿರುವುದು ಹಾಸ್ಯಾಸ್ಪದ, 2005-06 ರಲ್ಲಿ ಇದೇ ಯಡಿಯೂರಪ್ಪ ನಮ್ಮ ಬಳಿಗೆ ಬಂದು ಮಂತ್ರಿ ಪದವಿ ಕೇಳಿದ್ದು ಸುಳ್ಳಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ತುಮಕೂರಿನಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಷಫಿ ಅಹಮದ್ ಮತ್ತು ಬೆಂಬಲಿಗರು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್, ಬಿಜೆಪಿಯವರು ಹಿಂದುಳಿದವರ ಮುಗ್ದತೆಯನ್ನು ದುರುಪಯೋಗ ಮಾಡಿಕೊಂಡು ಮತ ಕೇಳುತ್ತಿದ್ದಾರೆ, ಇವರ ಬಗ್ಗೆ ಎಚ್ಚರ ವಹಿಸಿ ಎಂದರು.

ಮೂರು ದಿನಕ್ಕೆ ಒಂದು ಮನೆ ಕಟ್ಟುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ, ಅದು ಎಲ್ಲಿ ಕಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದ ಅವರು,ರಾಜ್ಯದ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆ ಹಾಕಿಕೊಂಡಿದ್ದೇನೆ, ನನ್ನ ಕೈ ಬಲಪಡಿಸಿ, ನಾನು ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುವೆ ಎಂದರು.

ರಾಜ್ಯಕ್ಕೆ ಯೋಗಿ, ಮೋದಿ, ನಡ್ಡಾ ಸೇರಿ ಹಲವರು ಬಂದು ರೋಡ್ ಶೋ ಮಾಡುತ್ತಿದ್ದಾರೆ, ಮಂಡ್ಯಕ್ಕೂ ಮೋದಿಗೂ ಏನು ಸಂಬಂಧ, ಬುಲ್ಡೋಜರ್ ಯೋಗಿಯಿಂದ ರಾಜ್ಯದ ಜನರಿಗೆ ಏನು ಉಪಯೋಜನ ಎಂದು ಪ್ರಶ್ನಿಸಿದರು.

ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜ್ಯದ ಜನರನ್ನು ಮೋಸ ಮಾಡಲಾಗುತ್ತಿದೆ, ರಾಷ್ಟ್ರೀಯ ಪಕ್ಷಗಳು ಜನರನ್ನು ವಂಚಿಸುತ್ತಿವೆ, ಈ ಬಗ್ಗೆ ಜನರು ಎಚ್ಚರ ವಹಿಸಬೇಕು.ಜೆಡಿಎಸ್ ನೂರಾ ಇಪ್ಪತ್ತು ಸೀಟು ಗಳಿಸುವ ವಿಶ್ವಾಸ ಇದೆ, ಜನರು, ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ, ತುಮಕೂರು ಜಿಲ್ಲೆಯಲ್ಲಿ ಹನ್ನೊಂದು ಸ್ಥಾನ ಗೆಲ್ಲಲಿದ್ದೇವೆ, ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ದಲ್ಲಿ ಮುಳುಗಿವೆ, ಜೆಡಿಎಸ್ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ನಾನು ರೈತರ ಸಾಲ ಮನ್ನಾ ಮಾಡಿದೆ, ಅಲ್ಲಿ ನಾನು ಯಾವುದೇ ಪರ್ಸೆಂಟೇಜ್ ಪಡೆಯಲಿಲ್ಲ, ರಾಜ್ಯದ ಅಭಿವೃದ್ಧಿ ಗಾಗಿ ಜೆಡಿಎಸ್ ಗೆ ಮತ ನೀಡಿ, ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದರು.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿದ್ದಾರೆ, ದೇವೇಗೌಡರು ಎಂದು ಜಾತಿ ರಾಜಕಾರಣ ಮಾಡಲಿಲ್ಲ, ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದರು.

Similar News