ಪದವಿ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣ: ಶೋಭಾ ಕರಂದ್ಲಾಜೆ

ಕಾರ್ಯಕ್ರಮದ ನೆಪ ಹೇಳಿ ಪತ್ರಿಕಾಗೋಷ್ಟಿ ಮೊಟಕುಗೊಳಿಸಿದ ಕೇಂದ್ರ ಸಚಿವೆ

Update: 2023-04-28 12:23 GMT

ಶಿವಮೊಗ್ಗ, ಎ.28: 'ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಲು ಹೆಚ್ಚಿನ ಶಿಕ್ಷಣ ಪಡೆಯುತ್ತಿರುವುದು ಕಾರಣ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ನಿರುದ್ಯೋಗ ಹೆಚ್ಚಳವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಲು ಹೆಚ್ಚಿನ ಶಿಕ್ಷಣ ಪಡೆಯುತ್ತಿರುವುದು ಕಾರಣ. ವರ್ಷದಿಂದ ವರ್ಷಕ್ಕೆ ಪದವಿ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಒಂದು ಕಾಲದಲ್ಲಿ ಪದವಿ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ವಿದ್ಯಾವಂತರಿಗೆ ಸ್ವಯಂ ಉದ್ಯೋಗ ಮಾಡಲು ಹಾಗೂ ಸರ್ಕಾರಿ ಉದ್ಯೋಗ ಮಾಡುವುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 10 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಪ್ರಾರಂಭವಾಗಿವೆ' ಎಂದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ  ಮಾಡುತ್ತೇವೆ ಅಂತ ಹೇಳಿದ್ದೀರಿ, ಈಗ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಿಖರ ದಾಖಲೆ ಇಲ್ಲ,ಮಾಹಿತಿ ಪಡೆದು ಉತ್ತರಿಸುತ್ತೇನೆ' ಎಂದು ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು.

ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ದೇಶದಲ್ಲಿ ನಾಲ್ಕು ವಿಚಾರದಲ್ಲಿ ಆತ್ಮನಿರ್ಭರವಾಗಿಲ್ಲ.ರಸಗೊಬ್ಬರ,ಖಾದ್ಯ ತೈಲ,ಪೆಟ್ರೋಲಿಯಂ ಹಾಗೂ ಶಸ್ತ್ರಾಶದಲ್ಲಿ ಸ್ವಾವಲಂಬಿ ಇಲ್ಲ.ಈ ನಾಲ್ಕು ವಿಚಾರದಲ್ಲಿ ಸ್ವಾವಲಂಬಿಯಾಗಬೇಕು.ಹಾಗಾದಾಗ ಮಾತ್ರ ಭಾರತವನ್ನು ಎಲ್ಲಾ ವಿಚಾರದಲ್ಲಿ ಆತ್ಮನಿರ್ಭರ ಮಾಡಲು ಸಾಧ್ಯ; ಎಂದರು.

ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,ಈ ದೇಶದಲ್ಲಿ ಭ್ರಷ್ಟಾಚಾರದ ತಂದೆ-ತಾಯಿ ಕಾಂಗ್ರೆಸ್.ಭಾರತವನ್ನು ಭ್ರಷ್ಟಾಚಾರದ ದೇಶ ಎಂದು ಕರೆಯಲು ಕಾಂಗ್ರೆಸ್ ಕಾರಣ ಎಂದರು.

ನಿಮ್ಮ ಸರ್ಕಾರದ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದಿಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ನಮ್ಮ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುತ್ತಿದೆ ಎಂದರು.

ಪತ್ರಕರ್ತರು ಹಲವು ಪ್ರಶ್ನೆಗಳನ್ನು ಕೇಳುತ್ತಾ ಇದ್ದರೂ ಕಾರ್ಯಕ್ರಮದ ನೆಪ ಹೇಳಿ ಪತ್ರಿಕಾಗೋಷ್ಠಿ ಮೊಟಕುಗೊಳಿಸಿದರು. 

Similar News