ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ರೋಡ್ ಶೋ: ಮಲ್ಲಿಕಾರ್ಜುನ ಖರ್ಗೆ, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಸಾಥ್

Update: 2023-04-30 16:16 GMT

ಶಿವಮೊಗ್ಗ: ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸ್ಟಾರ್ ಪ್ರಚಾರಕರು ಸೊರಬ ತಾಲೂಕಿನ ಆನವಟ್ಟಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಸೊರಬ ತಾಲೂಕಿನ ಆನವಟ್ಟಿಗೆ ಬಂದಿಳಿದ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಟ ಶಿವರಾಜ್ ಕುಮಾರ್,ಗೀತಾ ಶಿವರಾಜ್ ಕುಮಾರ್ ಅವರು ಬೃಹತ್‌ ರೋಡ್ ಶೋ ನಡೆಸಿದರು.

ಆನವಟ್ಟಿಯ ವಿಠಲ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಸಮಾವೇಶದ ಸ್ಥಳದವರೆಗೆ ನಡೆಯಿತು.ಉರಿ ಬಿಸಿಲನ್ನು ಲೆಕ್ಕಿಸದೇ ನೆಚ್ಚಿನ ನಾಯಕ ಮಧುಬಂಗಾರಪ್ಪ ಪರ ಬಾರೀ ಜನಸ್ತೋಮ ಸೇರಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಮಧುಬಂಗಾರಪ್ಪ ಪರವಾಗಿ ಜಯಘೋಷಗಳನ್ನು ಕೂಗಿದರು.

ರೋಡ್ ಶೋನಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮಿಂಚಿದ್ರು. ಕಿಕ್ಕಿರಿದು ಸೇರಿದ ಜನಸ್ತೋಮ ನೋಡಿ ಇಬ್ಬರು ಸೆಲ್ಫಿ ತೆಗೆದುಕೊಂಡರು.

ಪ್ರಚಾರ ಸಭೆಯಲ್ಲಿ ಮಾತನಾಡಿದ‌ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು, ತಂದೆಯ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೊರಬ ಕ್ಷೇತ್ರಕ್ಕೆ ಆಗಮಿಸಿದ್ದು ಸಂತಸ ನೀಡುವ ಜನತೆ ಶಕ್ತಿ ನೀಡಿದಂತಾಗಿದೆ. ನನ್ನೊಂದಿಗೆ ಗೀತಕ್ಕ ಸದಾ ಇದ್ದು ಶಿವರಾಜ್ ಕುಮಾರ್ ಅವರು ಮೊದಲ ಭಾರಿಗೆ ರಾಜಕೀಯ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಜತೆಗೆ ನನ್ನ ಪರ ಪ್ರಚಾರ ನಡೆಸಿದ್ದು ಮನತುಂಬಿ ಬಂದಿದೆ ಎಂದರು.

ಸೊರಬದಲ್ಲಿ ನಾನು ಯಾರಿಗೆ ತೊಂದರೆ ಕೊಟ್ಟಿಲ್ಲ.ರಾಜ್ಯದಲ್ಲಿ ಅತೀ ಹೆಚ್ಚು ಲೀಡ್ ನಿಂದ ಸೊರಬದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು.ರಾಜ್ಯಕ್ಕೆ ಬಂಗಾರಪ್ಪ ಅವರು ಕೊಡುಗೆ ನೀಡಿದ್ದಾರೆ.‌ಬಂಗಾರಪ್ಪ ಕೊಟ್ಟ ಯೋಜನೆಯನ್ನ ಬಿಜೆಪಿ ಸರ್ಕಾರ ಮುಂದುವರೆಸಿಕೊಂಡು ನಾವು ಮಾಡಿದ್ದು ಎನ್ನುತ್ತಿದ್ದಾರೆ.ನಾನು ಗೆಲ್ಲುತ್ತೆನೆ ಎಂಬ ವಿಶ್ವಾಸವಿದೆ. ಅದ್ರೇ, ಹೆಚ್ಚು ಅಂತರದಲ್ಲಿ ಗೆಲ್ಲಬೇಕು ಎಂದರು.

ಶಿವರಾಜ್ ಕುಮಾರ್ ಮಾತನಾಡಿ, ಮಧು ಕೇವಲ ಭಾವ ಮಾತ್ರ ಅಲ್ಲ, ಸ್ನೇಹಿತ ಕೂಡ. ಒಳ್ಳೆಯದನ್ನು ಮಾಡಬೇಕು ಎಂಬ ಭಾವನೆ ಮಧು ಮನಸ್ಸಿನಲ್ಲಿದೆ. ಅವರಿಗೆ ನಿಮ್ಮ ಬೆಂಬಲ, ಆಶೀರ್ವಾದ ಬೇಕು ಎಂದರು

ಮಧು ಬಂಗಾರಪ್ಪ ಶಾಸಕ, ಮಿನಿಸ್ಟರ್ ಏನೇ ಆದ್ರೂ ನಿಮ್ಮಲ್ಲಿ ಒಬ್ಬರಾಗಿ ಇರ್ತಾರೆ.ಆ ಭರವಸೆಯನ್ನು ನಾನು ನಿಮಗೆ ಕೊಡುತ್ತೇನೆ.ಮೇ 10 ರಂದು ಚುನಾವಣೆಯಲ್ಲಿ ನೀವು ಮಧು ಬಂಗಾರಪ್ಪ ಪರ ನಿಲ್ಲಬೇಕು.ಗೆಲುವಿನ ಸಂಭ್ರಮದಲ್ಲಿ ನಾನು ಬಂದು, ಹಾಡು ಹೇಳಿ, ಡ್ಯಾನ್ಸ್ ಮಾಡ್ತೇನೆ ಎಂದರು.

ರೋಡ್  ಶೋ ದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸದಸ್ಯ ಪ್ರಸನ್ನ ಕುಮಾರ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ, ಮಹಿಳಾ ಘಟಕಗಳ ಅಧ್ಯಕ್ಷರಾದ ಸುಜಾತಾ ಜೋತಾಡಿ, ವಿಶಾಲಾಕ್ಷಿ, ತಬಲಿ ಬಂಗಾರಪ್ಪ, ಆರ್.ಸಿ.ಪಾಟೀಲ್, ಮಂಜಪ್ಪ ನೇರಲಗಿ, ಕೆ.ಪಿ.ರುದ್ರಗೌಡ, ಕೆ.ವಿ.ಗೌಡ, ನಾಗಪ್ಪ ಮಾಸ್ತರ್, ಪುರುಷೋತ್ತಮ್, ಪ್ರವೀಣ್ ಕುಮಾರ್, ಸತೀಶ್ ಅರ್ಜುನಪ್ಪ, ಸುರೇಶ್ ಹಾವಣ್ಣನವರ್, ಜಿ.ಡಿ ಮಂಜುನಾಥ್ ಮತ್ತಿತರರಿದ್ದರು.

Similar News