ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿ ಜೊತೆ ಕಾಣಿಸಿಕೊಂಡ ರೌಡಿ ಶೀಟರ್: ಫೋಟೋ ವೈರಲ್‌

Update: 2023-05-01 17:45 GMT

ರಾಮನಗರ, ಮೇ 1: ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದರು. ಈ ವೇಳೆ ನರೇಂದ್ರ ಮೋದಿ ಅವರ ಜೊತೆ ವೇದಿಕೆಯಲ್ಲಿ ರೌಡಿ ಶೀಟರ ಓರ್ವ ಕಾಣಿಸಿಕೊಂಡಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಮೋದಿ ಜೊತೆಗೆ ರೌಡಿ ಶೀಟರ್ ಮುದ್ದುಕೃಷ್ಣ ಇರುವ ಫೋಟೊವನ್ನು ವಿಪಕ್ಷ ಕಾಂಗ್ರೆಸ್ ಟ್ವಟಿರ್ ನಲ್ಲಿ ಹಂಚಿಕೊಂಡಿದೆ.

''ರೌಡಿಶೀಟರ್ ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ. ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು. ಮೋದಿಯವರ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ'' ಎಂದು ಕಾಂಗ್ರೆಸ್ ಟೀಕಿಸಿದೆ. 

ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ಉದ್ಘಾಟನೆಗೆ ಮಂಡ್ಯಕ್ಕೆ ಭೇಟಿ ನೀಡಿದ್ದ ವೇಳೆ ರೌಡಿಶೀಟರ್‌ ಫೈಟರ್‌ ರವಿಗೆ ಪ್ರಧಾನಿ ಮೋದಿ ಕೈ ಮುಗಿದಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 

Similar News