ಬಿಜೆಪಿ ಆಡಳಿತದಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ರಾಜ್ಯದ ಸ್ಥಾನ: ಪ್ರಧಾನಿ ಮೋದಿ

''ರಾಜ್ಯದ ಮರ್ಯಾದೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತೇವೆ''

Update: 2023-05-02 13:00 GMT

ವಿಜಯನಗರ, ಮೇ 2: ‘ಬಿಜೆಪಿ ಆಡಳಿತದಲ್ಲಿ ಇಡೀ ದೇಶದಲ್ಲೇ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುತ್ತೇವೆ. ನಿನ್ನೆ ಕರ್ನಾಟಕ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ಅದನ್ನು ಗಮನಿಸಿದಾಗ ಬಡವರ ಏಳಿಗೆಯ ಚಿಂತನೆ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ‘ನವಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಕರ್ನಾಟಕದ ವಿಕಾಸ ಮಾಡಲು ಬದ್ಧ. ರಾಜ್ಯದ ಮಾನ ಮರ್ಯಾದೆಗೆ ಯಾವುದೇ ರೀತಿಯ ದಕ್ಕೆಯಾಗಂತೆ ನಾವು ನಡೆದುಕೊಳ್ಳುತ್ತೇವೆ. ಪ್ರಪಂಚದಲ್ಲಿ ಭಾರತ ಆರ್ಥಿಕವಾಗಿ 5ನೆ ಸ್ಥಾನದಿಂದ 3ನೆ ಸ್ಥಾನಕ್ಕೆ ತರುವ ಕೆಲಸವನ್ನು ಕೇವಲ ಮೋದಿ ಮಾಡಲು ಆಗುವುದಿಲ್ಲ. ನೀವು ನಿಮ್ಮ ಮತ ಹಾಕುವ ಮೂಲಕ ಮಾಡಬೇಕಿದೆ ಎಂದರು.

ಕಾಂಗ್ರೆಸ್‍ನವರು ಸುಳ್ಳುಗಳೇ ತುಂಬಿರುವ ಗ್ಯಾರಂಟಿ ಕಾರ್ಡ್ ಹಿಡಿದು ಬಂದಿದ್ದಾರೆ. ಕಾಂಗ್ರೆಸ್‍ಗೆ ತನ್ನ ಅಸ್ತಿತ್ವದ ಬಗ್ಗೆಯೆ ಭರವಸೆ ಇಲ್ಲ. ಇಂತಹದರಲ್ಲಿ ಅವರು ನೀಡುವ ಗ್ಯಾರಂಟಿಗೆ ಅರ್ಥವೇ ಇಲ್ಲ. ತಾವು ಲೂಟಿ ಮಾಡುವ ಯೋಚನೆಯಲ್ಲಿ ಇಂತಹ ಯೋಜನೆ ತರುತ್ತಾರೆ ಎಂದು ಎಚ್ಚರಿಸಿದ ಅವರು, ಈ ಹಿಂದೆ ಗರೀಬಿ ಹಠಾವೋ ಎಂದು ಹೇಳುತ್ತಾ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು.

ವೈಭವದ ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ಸ್ವಾಮಿ, ಉಗ್ರ ನರಸಿಂಹ ಸ್ವಾಮಿ ಹಾಗೂ ಹುಲಿಗೆಮ್ಮ ದೇವಿಗೆ ನನ್ನ ಸಹಸ್ರ ಪ್ರಣಾಮಗಳು. ಹನುಮಂತನ ಪವಿತ್ರ ಭೂಮಿಗೆ ಪ್ರಣಾಮ ಸಲ್ಲಿಸಲು ಆಗಮಿಸಿದ್ದೇನೆ. ಇಂತಹ ಪವಿತ್ರ ಭೂಮಿಯಲ್ಲಿ ಹನುಮಂತನ ಭಜನೆ ನಿಲ್ಲಿಸಲು ಕಾಂಗ್ರೆಸ್ ಮುಂದಾಗಿದೆ. ರಾಮ ಜನ್ಮಭೂಮಿ ವಿಷಯದಲ್ಲೂ ಕಾಂಗ್ರೆಸ್ ತೊಂದರೆ ನೀಡಿತ್ತು. ಈಗ ಹನುಮಂತನ ವಿಷಯದಲ್ಲೂ ಅದೇ ರೀತಿ ನಡೆದುಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಆಡಳಿತದಿಂದಾಗಿ ಹಳ್ಳಿ ಮತ್ತು ನಗರದ ಮಧ್ಯೆ ಕಂದಕ ನಿರ್ಮಾಣ ಮಾಡಿದೆ. ಇದನ್ನು ಕಡಿಮೆ ಮಾಡಲು ನಾವು ಕ್ರಮ ತೆಗೆದುಕೊಂಡಿದ್ದೇವೆ. ನಗರದ ಪ್ರದೇಶದ ಸೌಲಭ್ಯಗಳು ಗ್ರಾಮೀಣ ಭಾಗದಲ್ಲೂ ದೊರಕುವಂತೆ ಮಾಡುವುದು ನಮ್ಮ ಪ್ರಯತ್ನ. ಬಹಳ ದಿನಗಳಿಂದ ನಮ್ಮ ರೈತರ ಬೇಡಿಕೆ ಇದೆ. ಅವರ ಜಮೀನಿಗೆ ಜಮೀನಿಗೆ ನೀರಾವರಿ ಆಗಬೇಕಿತ್ತು ಎಂದರು.

ನಮ್ಮ ಡಬಲ್ ಎಂಜಿನ್ ಸರಕಾರದಿಂದ ಸಮಾಜಿಕ ನ್ಯಾಯ, ಸಾಮಾಜಿಕ ಸಶಕ್ತೀಕರಣ ಪ್ರಾಮುಖ್ಯತೆ ಪಡೆದಿದೆ. ಬಡವರ, ರೈತರ, ದುರ್ಬಲರ ಕಲ್ಯಾಣ ಕಾಣುತ್ತಿದೆ. ಪಿಎಂ ಕಿಸಾನ್ ಬೆಳೆವಿಮೆ ಬಹಳ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಸಹಕಾರಿ. ಅನೇಕ ಸಲ ಅತಿವೃಷ್ಟಿಯಿಂದ ರೈತರಿಗೆ ತೊಂದರೆಯಾಗಿದೆ. ರೈತರ ಸಂಕಷ್ಟ ತಪ್ಪಿಸಲು ವಿಮಾ ಯೋಜನೆ ಜಾರಿಗೊಳಿಸಿದ್ದೇವೆ ಎಂದರು.

‘ಕಾಂಗ್ರೆಸ್ ದುರಂಹಂಕಾರಿ ಪಕ್ಷ. ದೇಶದ ಗ್ರಾ.ಪಂ.ನಿಂದ ಪಾರ್ಲಿಮೆಂಟ್ ವರೆಗೂ ಅವರದೇ ಆಡಳಿತ ಇತ್ತು. ಇವರ ದುರಂಹಂಕಾರ ನೋಡಿ ದೇಶದ ಜನ ಮೂರು ರಾಜ್ಯಗಳಲ್ಲಿ ಮಾತ್ರ ಇವರಿಗೆ ಅಧಿಕಾರ ನೀಡಿದೆ. ಈ ಮೂರು ರಾಜ್ಯದಲ್ಲಿ ಕಾಂಗ್ರೆಸ್‍ನವರ ಭ್ರಷ್ಟಾಚಾರದ ಹಸಿವು ತುಂಬುತ್ತಿಲ್ಲ. ಹಾಗಾಗಿ ಕರ್ನಾಟಕದ ಜನರ ಹಣ ಲೂಟಿ ಮಾಡಲು ಮುಂದಾಗಿದ್ದಾರೆ. ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಕರ್ನಾಟಕದ ಜನತೆ ಎಚ್ಚರದಿಂದ ಇದ್ದು ಅವರನ್ನು ಅಧಿಕಾರದಿಂದ ದೂರ ಇಡಬೇಕಿದೆ ಎಂದು ತಿಳಿಸಿದರು.

‘ಸಶಕ್ತ್ತ ಭಾರತದ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಕರ್ನಾಟಕದಲ್ಲಿ ಪ್ರವಾಸ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ವಿಷಯದಲ್ಲಿ ಎಲ್ಲ ಜನತೆಯನ್ನು ಮೇಲಕ್ಕೆತ್ತುವ ಕೆಲಸವಾಗಬೇಕಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್‍ನವರ ಮೋಸಕ್ಕೆ ಒಳಗಾಗದೆ ಬಿಜೆಪಿಗೆ ಬೆಂಬಲಿಸಿ ದೇಶವನ್ನು ಮುನ್ನಡೆಸಬೇಕಿದೆ’

-ನರೇಂದ್ರ ಮೋದಿ ಪ್ರಧಾನಿ

Similar News