ಸಚಿವ ನಾರಾಯಣಗೌಡ ಕಾರಿಗೆ ಮುತ್ತಿಗೆ: ಕೈಕೈ ಮಿಲಾಯಿಸಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು
ಮಂಡ್ಯ: ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಬಿಜೆಪಿ ಅಭ್ಯರ್ಥಿ, ಸಚಿವರಾದ ಡಾ.ನಾರಾಯಣಗೌಡ ಅವರ ಕಾರಿಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಕೆಆರ್ ಪೇಟೆ ಶೀಳನೆರೆ ಹೋಬಳಿ ರಾಜಘಟ್ಟದ ಬಳಿ ನಡೆದಿದೆ.
ರಾಜಘಟ್ಟ ಗೇಟ್ ಬಳಿ ಏಕಾಏಕಿ ಸಚಿವ ಡಾ.ನಾರಾಯಣಗೌಡ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದ 70ಕ್ಕೂ ಜೆಡಿಎಸ್ ಕಾರ್ಯಕರ್ತರು ನಾರಾಯಣಗೌಡರಿಗೆ ಘೇರಾವ್ ಹಾಕಿದ್ದಾರೆನ್ನಲಾಗಿದೆ.
''ನಾನು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಬೆಂಬಲಿಗರು ಚುನಾವಣಾ ಪ್ರಚಾರಕ್ಕೆ ಅಡ್ಡಿ ಪಡಿಸಿದ್ದಲ್ಲದೆ ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದು ವಿಷಾದನೀಯ. ಈ ಹಿಂದೆ ಈಗಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ರವರ ಮೇಲೂ ಇದೇ ರೀತಿ ಹಲ್ಲೆಗೆ ಮುಂದಾಗಿದ್ದರು, ಈಗ ನನ್ನ ಮೇಲೆ ಹಲ್ಲೆಗೆ ಯತ್ನಿಸಿರುವುದು ಖಂಡನೀಯವಾಗಿದೆ'' ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಪತ್ರಿಕಾ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.