×
Ad

ತುಮಕೂರು | ಜನವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಲು ದಲಿತ ಸಂಘಟನೆಗಳ ಕರೆ

Update: 2023-05-04 20:02 IST

ತುಮಕೂರು: ದಲಿತರು, ದಮನಿತರು, ರೈತರು, ಅಲ್ಪಸಂಖ್ಯಾತರು ಸೇರಿದಂತೆ ಜನವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಿ ಮನೆಗೆ ಕಳಿಸಬೇಕಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮನವಿ ಮಾಡಿದ್ದಾರೆ. 

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಮೋದಿ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಅತ್ಯಂತ ಸಮರ್ಥ ಜನ ಚಳವಳಿಗಳಲ್ಲಿ ದಲಿತ ಸಂಘರ್ಷ ಸಮಿತಿಯು ವಿಶಿಷ್ಟವಾಗಿ ನಿಲ್ಲುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ನಮ್ಮ ದಲಿತ ಸಂಘರ್ಷ ಸಮಿತಿಯ ಜೀವಾಳ ಮತ್ತು ಮನೋಸ್ಥೈರ್ಯ ಅಂಬೇಡ್ಕರ್ ಸಿದ್ದಾಂತವೇ ನಮ್ಮ ಸಿದ್ದಾಂತ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನೋಟು ರದ್ದತಿ, ಜಿಎಸ್.ಟಿ ಜಾರಿಗೊಳಿಸಿ ಜನರು ನರಳುವಂತೆ ಆಯಿತು. ಬೆಲೆ ಏರಿಕೆ, ಕೋಮುದಳ್ಳುರಿ, ಭಯೋತ್ಪಾದನೆ ವಿಪರೀತ ಜಾತಿ ದೌರ್ಜನ್ಯಗಳಿಂದ ಬಡವರು ನೋವು ತಿಂದರು. ಕಳೆದ 9 ವರ್ಷಗಳಲ್ಲಿ ದೇಶದ ಜನಸಾಮಾನ್ಯರು ನರಕ ನೋಡಿದ್ದಾರೆ. ಅದರಲ್ಲಿ ದಲಿತರು ರೌರವ ನರಕ ಅನುಭವಿಸಿದ್ದಾರೆ ಎಂದು ಹೇಳಿದರು.

ದೇಶ ಮತ್ತು ರಾಜ್ಯದಲ್ಲಿ ಕಾನೂನು ಹಾಘೂ ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದು ನೈತಿಕ ಪೊಲೀಸ್ ಗಿರಿ ರಾರಾಜಿಸುತ್ತಿದೆ. ಕಾರ್ಯಾಂಗದಲ್ಲಿ ಸಂಘ ಪರಿವಾರದ ಮನಸ್ಥಿತಿಗಳು ಸ್ವಜನ ಪಕ್ಷಪಾತಿಗಳಾಗಿದ್ದಾರೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತ ಬಿಜೆಪಿ ಸರ್ಕಾರದ ಅಣತಿಯಂತೆ ವರ್ತಿಸುತ್ತಿವೆ ಎಂದು ಟೀಕಿಸಿದರು.

ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಜನದ್ರೋಹಿ ಆರ್.ಎಸ್.ಎಸ್ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಪಕ್ಷಕ್ಕೆ ಷರತ್ತುಬದ್ದ ಬೆಂಬಲ ನೀಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಾಲನ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು.

ಜನಪರ ಚಿಂತಕ ಹಾಗೂ ಹಿರಿಯ ದಲಿತ ಮುಖಂಡ ಕೆ.ದೊರೈರಾಜ್ ಮಾತನಾಡಿ, ಬಿಜೆಪಿ ಸರ್ಕಾರ ದಲಿತ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಅಷ್ಟೇ ಅಲ್ಲ ಆರ್.ಎಸ್.ಎಸ್ ಮತ್ತು ಬಿಜೆಪಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಇಂತಹ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಜನಪರ ಚಿಂತಕ ಕೆ.ದೊರೈರಾಜ್, ಮುಖಂಡರಾದ ಎಂ.ಸೋಮಶೇಖರ್, ಎನ್.ವೆಂಕಟೇಶ್ ಕೋಲಾರ, ಡಾ.ಡಿ.ಮುರುಳೀಧರ್, ಜೈಮೂರ್ತಿ, ಡಿ.ಭಾರತ್ ಕುಮಾರ್ ಬೆಲ್ಲದಮಡು, ರಾಮಾಂಜನೇಯ ಇದ್ದರು

Similar News