ಮೂಡಿಗೆರೆ: ಎರಡು ಗುಂಪಿನ ನಡುವಿನ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

Update: 2023-05-05 17:36 GMT

ಮೂಡಿಗೆರೆ, ಮೇ 5: ಜಮೀನಿನ ರಸ್ತೆಗೆ ಸಂಬಂದಿಸಿದಂತೆ ನಡೆಯುತ್ತಿದ್ದ ವಿವಾದಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತಾಲೂಕಿನ ಚಿಕ್ಕಳ್ಳ ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.

ಚಿಕ್ಕಳ್ಳ ಗ್ರಾಮದ ಪ್ರವೀಣ್ (46 ವರ್ಷ) ಕೊಲೆಯಾದ ಯುವಕನಾಗಿದ್ದು, ಗ್ರಾಮದಲ್ಲಿರುವ ರಸ್ತೆಗೆ ಸಂಬಂಧಿಸಿದಂತೆ ಗ್ರಾಮದ ಎರಡು ಗುಂಪುಗಳ ನಡುವೆ ವಿವಾದ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ಹಾದುಹೋಗಿದ್ದ ವಿವಾದಿತ ರಸ್ತೆಯಲ್ಲಿ ವಿರೋಧಿ ಗುಂಪಿನವರು ಕೆಲಸ ಮಾಡುತ್ತಿದ್ದಾಗ ಅದನ್ನು ಪ್ರಶ್ನಿಸಲು ಬಂದ ಪ್ರವೀಣ್ ಮೇಲೆ ಸ್ಥಳದಲ್ಲಿದ್ದ ಗುಂಪು ಕತ್ತಿ ಹಾರೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಈ ಸಂದರ್ಭದಲ್ಲಿ ಪ್ರವೀಣ್ ಅವರ ತಂದೆ ಲಕ್ಷ್ಮಣಗೌಡ ಅವರ ಬಲಗೈಗೂ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ರಸ್ತೆಗೆ ಸಂಬಂಧಿಸಿದಂತೆ ಕೆಲ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಈಗ್ಗೆ ಕೆಲ ತಿಂಗಳ ಹಿಂದೆ ಪರಸ್ಪರ ಎರಡು ಕಡೆಯವರ ನಡುವೆ ಹೊಡೆದಾಟ ನಡೆದಿತ್ತು. 

ಘಟನೆ ಸಂಬಂಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಆಸ್ಪತ್ರೆ ಒಯ್ಯಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದ್ದು, ಆಸ್ಪತ್ರೆ ಆವರಣದಲ್ಲಿ ಪ್ರವೀಣ್‍ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Similar News