ಚುನಾವಣಾ ಪ್ರಚಾರ: ಮಂಡ್ಯ ಜಿಲ್ಲೆಯಲ್ಲಿಂದು ದೇವೇಗೌಡ, ನಡ್ಡಾ, ಡಿಕೆಶಿಯಿಂದ ರೋಡ್ ಶೋ

Update: 2023-05-06 15:58 GMT

ಮಂಡ್ಯ, ಮೇ 6: ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ರೋಡ್ ಶೋ ನಡೆಸಿ ಮತಯಾಚಿಸಿದರು.

ಎಚ್.ಡಿ.ದೇವೇಗೌಡರು ಮದ್ದೂರು, ಕೆ.ಎಂ.ದೊಡ್ಡಿ, ಕೆ.ಹೊನ್ನಲಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಶಾಸಕ ಡಿ.ಸಿ.ತಮ್ಮಣ್ಣ ಪರವಾಗಿ, ಜೆ.ಪಿ.ನಡ್ಡಾ ಮದ್ದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪರವಾಗಿ, ಡಿ.ಕೆ.ಶಿವಕುಮಾರ್ ಪಕ್ಷದ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರವಾಗಿ ಕೊಪ್ಪದಲ್ಲಿ, ಎಂ.ಬಿ.ಪಾಟೀಲ್ ಮಳವಳ್ಳಿಯಲ್ಲಿ, ದರ್ಶನ್ ಪುಟ್ಟಣ್ಣಯ್ಯ ದುದ್ದ ಹೋಬಳಿಯಲ್ಲಿ ರೋಡ್ ಶೋ ನಡೆಸಿದರು.

ರೋಡ್ ಶೋ ವೇಳೆ ಹೊಳಲು ಗ್ರಾಮದಲ್ಲಿ ಮಾತನಾಡಿದ ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ತನ್ನನ್ನು ಗೆಲ್ಲಿಸುವ ಮೂಲಕ ನಿಮ್ಮಗಳ ಸೇವೆಗೆ ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಯುವ ಮುಖಂಡ ಚಿಕನ್ ರವಿ  ಬಿಜೆಪಿ ತೊರೆದು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿ ರೈತಸಂಘಕ್ಕೆ ಸೇರ್ಪಡೆಗೊಂಡರು.

ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಮುಖಂಡರಾದ ರವಿ ಬೋಜೇಗೌಡ, ಡಾ.ಎಚ್.ಎನ್.ರವೀಂದ್ರ, ಸಿ.ಕೆ.ನಾಗರಾಜು, ಸಿ.ಡಿ.ಗಂಗಾಧರ್, ಗ್ರಾಪಂ ಅಧ್ಯಕ್ಷ ಎಚ್.ಎಲ್.ಅಭಿನಂದನ್, ನಂದೀಶ್, ಜಟ್ಟಿ ಕುಮಾರ್, ರೈತ ಸಂಘದ ಯುವ ಮುಖಂಡ ಚಂದನ್, ಚೇತನ್, ಶ್ಯಾಮ್, ಪಟೇಲ್ ರಾಮು, ಸೂರಿ, ಅಭಿ, ಮಾಜಿ ಗ್ರಾಪಂ ಅಧ್ಯಕ್ಷೆ ಲಿಂಗರಾಜಮ್ಮ, ಡೇರಿ ಮಾಜಿ ಅಧ್ಯಕ್ಷೆ ಪದ್ಮಾ, ಶಾಂತಮ್ಮ, ಲತಾ ಶಂಕರ್, ವಿನುತಾ ಇತರರು ಭಾಗವಹಿಸಿದ್ದರು.

ಕೆ.ಎಂ.ದೊಡ್ಡಿಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡ, ತಮ್ಮಣ್ಣ ಬರಿ ರಾಜಕಾರಣಿ ಮಾತ್ರವಲ್ಲ, ತಾಂತ್ರಿಕ ತಜ್ಞರು.  ರಾಜ್ಯದ ಆಗುಹೋಗುಗಳ ಬಗ್ಗೆ ತಿಳಿದಿರುವರು. ಹಾಗಾಗಿ ಜನರು ಅವರನ್ನು ಮತ್ತೆ ಆಯ್ಕೆಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ತಮ್ಮಣ್ಣರಿಂದ ರಾಜಕೀಯವಾಗಿ ಬೆಳೆದು ಬಂದು ಅವರಿಗೇ ವಂಚನೆ ಮಾಡುತ್ತಿರುವ ವ್ಯಕ್ತಿಯ ಹೆಸರು ಹೇಳುವುದು ನಮ್ಮಂತಹವರಿಗೆ ಉಚಿತವಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅವರನ್ನು ಟೀಕಿಸಿದರು. ತಮ್ಮಣ್ಣ ಅವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವಂತೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಝಫರುಲ್ಲಾ ಖಾನ್, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್,  ಸಂತೋಷ್ ತಮ್ಮಣ್ಣ, ಸೌಮ್ಯ ರಮೇಶ್, ಕವಿತಾ ಸಂತೋಷ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಚಿಕ್ಕತಿಮ್ಮೇಗೌಡ, ಹನುಮಂತೇಗೌಡ, ಕೆ.ಪಿ.ದೊಡ್ಡಿ ಶಿವರಾಮು, ಮಾದನಾಯಕನಹಳ್ಳಿ ರಾಜಣ್ಣ, ಇತರ ಮುಖಂಡರು ಉಪಸ್ಥಿತರಿದ್ದರು.

Similar News