ಈ ವಾರ

Update: 2023-05-07 04:16 GMT

ಬಜರಂಗದಳ ಎಂಬ ನೆಪ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳದ ಪ್ರಸ್ತಾವ ಮಾಡಿದ್ದನ್ನು ಬಿಜೆಪಿ ಒಂದು ಅಸ್ತ್ರವಾಗಿ ಬಳಸಲು ನೋಡಿತು. ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದರು. ಅಷ್ಟಕ್ಕೂ ಕಾಂಗ್ರೆಸ್ ಹೇಳಿದ್ದು, ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಎಂದು ಮಾತ್ರ. ಕೋಮುಗಳ ನಡುವೆ ಯಾವುದೇ ಬಗೆಯ ದ್ವೇಷ ಬಿತ್ತುವ ಯಾವುದೇ ಸಂಘಟನೆಗಳಿದ್ದರೂ ಅದನ್ನು ಕಾನೂನು ಅನುಸಾರ ನಿಷೇಧ ಮಾಡಲಾಗುವುದು ಎಂದು ಹೇಳಲಾಗಿತ್ತು. ಮಾತನಾಡಲು ಏನೂ ಇಲ್ಲದೆ ತಣ್ಣಗಿದ್ದ ಬಿಜೆಪಿ ‘‘ನಾನು ಬಜರಂಗಿ’’ ಎಂಬ ಅಭಿಯಾನ ಶುರುಮಾಡಿಯೇ ಬಿಟ್ಟಿತು. ಬಜರಂಗದಳವನ್ನು ಹನುಮಂತನ ಜೊತೆ ಸಮೀಕರಿಸಲಾಯಿತು. ಹೊಸಪೇಟೆಯಲ್ಲಿದ್ದ ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿ, ‘‘ಹಿಂದೆ ಕಾಂಗ್ರೆಸ್ ಶ್ರೀರಾಮನನ್ನು ಬಂಧಿಸಿಟ್ಟಿತ್ತು. ಈಗ ಹನುಮಂತನನ್ನು ಬಂಧಿಸಲು ಹೊರಟಿದೆ’’ ಎಂದರು. ಅಚ್ಚರಿ ಹುಟ್ಟಿಸಿದ ವಿಚಾರವೆಂದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಬಜರಂಗದಳ ಪ್ರಸ್ತಾವ ಬಳಸಿಕೊಂಡು ಬಿಜೆಪಿಗಿಂತಲೂ ತೀವ್ರವಾಗಿ ಅರಚಾಡಿದ್ದು ಮಾಧ್ಯಮಗಳು. ತೀವ್ರ ಆಡಳಿತ ವಿರೋಧಿ ಅಲೆಯಿಂದ ಹೈರಾಣಾಗಿರುವ ಬಿಜೆಪಿಯನ್ನು ಮೇಲೆತ್ತಲು ಮಾಧ್ಯಮಗಳೆಲ್ಲ ತಯಾರಾಗಿ ನಿಂತ ಹಾಗೆ ಆ ಅರಚಾಟವಿತ್ತು. ಮಾಧ್ಯಮ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಮತ್ತೊಮ್ಮೆ ಬಯಲಾಯಿತು.

ಪ್ರಚಾರದ ಸಮಯ

ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧೆಡೆ ಮತಯಾಚನೆ ಮಾಡಿದರು. ಬೆಂಗಳೂರಿನಲ್ಲಿ ರೋಡ್ ಶೋ ಕೂಡ ನಡೆಸಿದರು. ಕಾಂಗ್ರೆಸ್ ರಿವರ್ಸ್ ಗೇರ್ ಪಕ್ಷ, ಅದು ಅಧಿಕಾರಕ್ಕೆ ಬಂದರೆ ಬಿಜೆಪಿ ಯೋಜನೆಗಳನ್ನೆಲ್ಲ ರದ್ದುಪಡಿಸುತ್ತದೆ. ಅದು ಸೇನೆಯನ್ನು ನಿಂದಿಸುವ ಪಕ್ಷ, ಬೋಗಸ್ ಭರವಸೆಗಳನ್ನು ನೀಡುತ್ತದೆ ಎಂದೆಲ್ಲ ಅಬ್ಬರದಿಂದ ಟೀಕಿಸಿದರು. ಇನ್ನೊಂದೆಡೆ ಕಾಂಗ್ರೆಸ್‌ನ ಪ್ರಿಯಾಂಕಾ, ರಾಹುಲ್ ಪ್ರಚಾರ ನಡೆಯಿತು. ಮೋದಿ ಆಡುವ ಮಾತುಗಳನ್ನು ಜನ ಕೇಳಬೇಕಾಗಿದೆಯೇ ವಿನಃ ಜನರಾಡುವ ಮಾತುಗಳನ್ನು ಮೋದಿ ಸೇರಿದಂತೆ ಯಾವ ಬಿಜೆಪಿ ನಾಯಕರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಪ್ರಿಯಾಂಕಾ ಟೀಕಿಸಿದರು. ‘‘ಮೋದಿ ದಿನವಿಡೀ ಅಳುವ ಕ್ರೈ ಬೇಬಿ’’ ಎಂದು ಖರ್ಗೆ ಹೇಳಿದರು. ಕೋವಿಡ್‌ನಿಂದ ಸತ್ತವರ, ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕವಿಲ್ಲದಿದ್ದರೂ, ಜನರು ತಮ್ಮನ್ನು ಬೈದಿದ್ದರ ಲೆಕ್ಕ ಮಾತ್ರ ಪ್ರಧಾನಿ ಬಳಿ ಇದೆ ಎಂದು ಕೆಪಿಸಿಸಿ ವ್ಯಂಗ್ಯವಾಡಿತು. ಸೊರಬ ಕ್ಷೇತ್ರದಲ್ಲಿನ ಪ್ರಚಾರದ ವೇಳೆ ರಾಹುಲ್‌ರನ್ನು ನಟ ಶಿವರಾಜ್‌ಕುಮಾರ್ ಭೇಟಿಯಾದರು. ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ತಾವು ಎಂದು ದೇವೇಗೌಡರು ಹೇಳಿಕೊಂಡರು. ಆರ್ಥಿಕ ಶಕ್ತಿ ಇದ್ದಿದ್ದರೆ ೧೩೦ ಸೀಟು ಗೆಲ್ಲುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದರು. ಕಡೆಗೂ ಪ್ರಚಾರ ಪಕ್ಷಗಳ ಪರಸ್ಪರ ಕೆಸರೆರಚಾಟವಲ್ಲದೆ ಬೇರೇನೂ ಅಲ್ಲ ಎಂಬುದೇ ಉದ್ದಕ್ಕೂ ಕಂಡಿತು.

ಜೆಡಿಎಸ್ ಮಾತು

ಕಾಂಗ್ರೆಸ್ ಪಕ್ಷದ ನಿಜವಾದ ಬಿ ಟೀಂ ಜೆಡಿಎಸ್, ಅದಕ್ಕೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ ಎಂದು ಮೋದಿ ಹೇಳಿದ್ದಕ್ಕೆ ದೇವೇಗೌಡರು ಸಿಟ್ಟಾದರು. ಪ್ರಧಾನಿ ಮೋದಿ ರಾಹುಲ್ ಗಾಂಧಿ ಮಟ್ಟಕ್ಕೆ ಇಳಿಯಬಾರದಿತ್ತು. ಕಳೆದ ಬಾರಿ ರಾಹುಲ್ ಹೇಳಿದ್ದನ್ನೇ ಈ ಬಾರಿ ಮೋದಿ ಹೇಳಿದರು ಎಂದು ದೇವೇಗೌಡ ಪ್ರತಿಕ್ರಿಯಿಸಿದರು. ದೇವೇಗೌಡರು ಮೋದಿಯನ್ನು ಹೊಗಳುವ ಕೆಲಸ ಮಾಡುತ್ತಲೇ ಬಂದವರು. ಕುಮಾರಸ್ವಾಮಿ ಬಿಜೆಪಿಯೊಂದಿಗೇ ಸೇರಿ ಸರಕಾರ ಮಾಡಿದ್ದವರು. ಜೆಡಿಎಸ್ ಪಕ್ಷವನ್ನು ಕರ್ನಾಟಕ ರಾಜಕಾರಣದಲ್ಲಿ ಒಂದು ಹೊಸ ಸಾಧ್ಯತೆಯಾಗಿ ರೂಪಿಸಬಲ್ಲ ಎಲ್ಲ ಅವಕಾಶಗಳನ್ನೂ ಅವಕಾಶವಾದಿ ರಾಜಕಾರಣಕ್ಕಾಗಿ ಬಲಿಕೊಟ್ಟಿದ್ದಕ್ಕೆ ಇಬ್ಬರೂ ಹೊಣೆಗಾರರಾಗಲೇಬೇಕಿದೆ. ಇಲ್ಲದೆ ಹೋಗಿದ್ದರೆ ಹೀಗೆ ಒಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷ ಎಂದು ಜರೆಸಿಕೊಳ್ಳಬೇಕಿರಲಿಲ್ಲ.

ದೇವನೂರರ ಎಚ್ಚರಿಕೆ

ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಖ್ಯಾತ ಸಾಹಿತಿ, ಚಿಂತಕ ದೇವನೂರ ಮಹಾದೇವ ಪ್ರಚಾರ ಮಾಡಿದ್ದು ವಿಶೇಷವಾಗಿತ್ತು. ಬಿಜೆಪಿ ತೋಡಿರುವ ಖೆಡ್ಡಾಕ್ಕೆ ಬೀಳಬೇಡಿ. ಮುಖ ನೋಡಬೇಡಿ, ನಡೆ ನೋಡಿ ಎಂದರು. ಮೋದಿ ಅಧಿಕಾರದಲ್ಲಿ ನಡೆದದ್ದೆಲ್ಲ ಜನವಿರೋಧಿ ಕೆಲಸಗಳೇ ಎಂದರು. ‘‘ಮೋದಿಯವರೇ ನಿಮ್ಮ ಮಾತಿಗೆ ನಮ್ಮ ಜನ ಇಷ್ಟೊಂದು ಬೆಲೆ ಕೊಟ್ಟಿದ್ದಾರೆ, ಇಷ್ಟೊಂದು ಗೌರವ ಕೊಟ್ಟಿದ್ದಾರೆ, ನಂಬಿದ್ದಾರೆ. ಹೀಗಿರುವಾಗ ನಿಮ್ಮ ಮಾತಿನ ಬಗ್ಗೆ ನಿಮಗೆ ಬೆಲೆ ಇಲ್ಲವೆ? ನಿಮ್ಮ ಮಾತನ್ನು ನೀವೇ ನಂಬೋದಿಲ್ಲವೇ?’’ ಎಂದು ಪ್ರಶ್ನಿಸಿದರು. ಬಿಜೆಪಿಯ ಹಿಂಸೆಯ ಬಗ್ಗೆ ಮಾತನಾಡುತ್ತ, ಹೂವು ಸುತ್ತಿ ಕಲ್ಲು ಎಸೆಯುವುದು ಸಂಘ ಪರಿವಾರದ ರಾಜಕಾರಣದ ವೈಖರಿ ಎಂದು ಎಚ್ಚರಿಕೆ ನೀಡಿದರು. ರಾಜ್ಯದ ಬಿಜೆಪಿಯ ನಾಯಕರೊಬ್ಬರು ಕ್ಷೇತ್ರದಲ್ಲಿ ಒಂದು ಹೆಣ ಬೀಳಿಸಿದರೆ ಎರಡು ಕ್ಷೇತ್ರ ಗೆದ್ದಂತೆ ಎಂದು ಹೇಳಿದ್ದು ಸುದ್ದಿಯಾಗಿತ್ತು. ಪ್ರಿಯಾಂಕ್ ಖರ್ಗೆ ವಿರುದ್ಧ ರೌಡಿಶೀಟರ್, ಗಡಿಪಾರು ಆಗಿದ್ದ ವ್ಯಕ್ತಿಯನ್ನು ಬಿಜೆಪಿ ನಿಲ್ಲಿಸಿದೆ. ಇಂತಹ ಭೂಗತ ರಾಜಕಾರಣ ಇಂದು ನಡೆಯುತ್ತಿದೆ. ದಯವಿಟ್ಟು ಎಚ್ಚರವಿರಿ ಎಂದೂ ದೇವನೂರ ಮಹಾದೇವ ಕಿವಿಮಾತು ಹೇಳಿದರು. ಅವರ ಸೂಕ್ಷ್ಮ ಮಾತುಗಳು ಇವತ್ತಿನ ಕಟು ರಾಜಕೀಯವನ್ನು ಎದುರಿಸಬೇಕಿರುವ, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿರುವ ಕಡೆಗಿನ ನೋಟಗಳಾಗಿವೆ.

ಕಣ್ಣೀರಿಟ್ಟ ಕುಸ್ತಿಪಟುಗಳು

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ವಿಚಾರದಲ್ಲಿ ಒಂದೆಡೆ ಕೇಂದ್ರ ಸರಕಾರದ ನಡೆ ಅನುಮಾನಾಸ್ಪದವಾಗಿದ್ದರೆ, ಇನ್ನೊಂದೆಡೆಯಿಂದ ಪ್ರತಿಭಟನೆಗೆ ಬೆಂಬಲ ಹೆಚ್ಚುತ್ತಿದೆ. ದಿಲ್ಲಿ ನೆರೆಯ ರಾಜ್ಯಗಳ ರೈತರು ಮತ್ತು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಜಂತರ್ ಮಂತರ್‌ಗೆ ಆಗಮಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದಕ್ಕೂ ಒಂದು ದಿನದ ಮೊದಲು ಪ್ರತಿಭಟನಾ ಸ್ಥಳಕ್ಕೆ ಬಂದ ಪಾನಮತ್ತ ಪೊಲೀಸರು ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿತ್ತು. ಕಣ್ಣೀರಿಟ್ಟ ಕುಸ್ತಿಪಟುಗಳು ಗೆದ್ದ ಪದಕ ಹಿಂತಿರುಗಿಸುವುದಕ್ಕೂ ಸಿದ್ಧ ಎಂದಿದ್ದಾರೆ. ಮಹಿಳೆಯರು, ದೇಶಭಕ್ತಿ ವಿಚಾರವಾಗಿ ದೊಡ್ಡ ಮಾತಾಡುವ ಸರಕಾರದ ಮಂದಿಗೆ, ದೇಶಕ್ಕೆ ಕೀರ್ತಿ ತಂದಿರುವ ಹೆಣ್ಣುಮಕ್ಕಳ ವಿಚಾರವಾಗಿ ಇಂಥ ಅಸಡ್ಡೆ ಯಾಕೆ, ಅವರಿಗೆ ಆದ ಅನ್ಯಾಯದ ಬಗ್ಗೆ ಸ್ಪಂದಿಸಲಾರದಷ್ಟು ಕ್ರೌರ್ಯ ಏಕೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಬದಲಾಗಿ ತಮ್ಮ ಸಂಸದನನ್ನೇ ಸಮರ್ಥಿಸಿಕೊಂಡು ಕುಳಿತಿರುವುದು ವಿಚಿತ್ರವಾಗಿದೆ.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ದಲ್ಲಿ ಭಾರತ ಕಳೆದ ಬಾರಿಗಿಂತಲೂ ೧೧ ಸ್ಥಾನ ಕೆಳಕ್ಕೆ ಕುಸಿದಿದೆ. ೧೮೦ ದೇಶಗಳನ್ನು ಒಳಗೊಂಡ ಸೂಚ್ಯಂಕದಲ್ಲಿ ಭಾರತ ೧೬೧ನೇ ಸ್ಥಾನಕ್ಕೆ ಇಳಿದಿದೆ. ಇದರೊಂದಿಗೆ ಭಾರತ ನೆರೆಯ ರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನಕ್ಕಿಂತಲೂ ಕೆಳಕ್ಕೆ ಕುಸಿದಂತಾಗಿದೆ. ಮಾಧ್ಯಮಗಳ ಮಾಲಕತ್ವವು ಕೇಂದ್ರೀಕೃತಗೊಂಡಿರುವುದು, ಮಾಧ್ಯಮವು ರಾಜಕೀಯ ಪಕ್ಷಪಾತ ಧೋರಣೆ ಅನುಸರಿಸುತ್ತಿರು ವುದು, ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿರುವುದು ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಮಾಧ್ಯಮ ಸ್ವಾತಂತ್ರ್ಯವನ್ನು ಬಿಕ್ಕಟ್ಟಿಗೆ ತಳ್ಳಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಹೆಸರಿನ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಆಳುವವರ ತುತ್ತೂರಿಯಾಗಿ ಗೋದಿ ಮೀಡಿಯಾಗಳಿರುವಾಗ ಪತ್ರಿಕಾ ಸ್ವಾತಂತ್ರ್ಯ ಎಂಬುದು ಇಲ್ಲವಾಗುತ್ತಿರುವ ಕರಾಳ ಸನ್ನಿವೇಶವನ್ನು ಕಾಣುತ್ತಿದ್ದೇವೆ.