ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ: ಜೆ.ಪಿ. ನಡ್ಡಾ
ಹೊಸಪೇಟೆ: ''ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಹರಪ್ಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ನಡ್ಡಾ, ''ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಿ, ಡಬಲ್ ಎಂಜಿನ್ ಸರ್ಕಾರ ಮುಂದುವರಿದರೆ ಮಾತ್ರ ಕೇಂದ್ರದ ಯೋಜನೆಗಳು ಮುಂದುವರೆಯುತ್ತವೆ'' ಎಂದು ಹೇಳಿದರು.
''ಸಿದ್ದರಾಮಯ್ಯ ಸರ್ಕಾರ ಬಂದರೆ ‘ಕಿಸಾನ್ ಸಮ್ಮಾನ್' ಯೋಜನೆ ಸೇರಿ ಹಲವು ಯೋಜನೆಗಳು ಬಂದ್ ಆಗಲಿವೆ'' ಎಂದು ತಿಳಿಸಿದರು.
''ನಡ್ಡಾ ಹೇಳಿಕೆ ಮತದಾರರಿಗೆ ಒಡ್ಡಿರುವ ಬೆದರಿಕೆ''
''ರಾಜ್ಯದಲ್ಲಿ ಬಿಜೆಪಿ ಸೋತರೆ ಯೋಜನೆಗಳೆಲ್ಲ ಬಂದ್ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆ ಸ್ಪಷ್ಟವಾಗಿ ಮತದಾರರಿಗೆ ಒಡ್ಡಿರುವ ಬೆದರಿಕೆಯಾಗಿದೆ. ಚುನಾವಣಾ ಆಯೋಗ ತಕ್ಷಣ ಮಧ್ಯೆ ಪ್ರವೇಶಿಸಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ದಿಟ್ಟ ಕ್ರಮಕೈಗೊಳ್ಳಬೇಕು''
- ಸಿದ್ದರಾಮಯ್ಯ , ವಿಪಕ್ಷ ನಾಯಕ