ಸೀಡಿ ಬಿಡುಗಡೆ ಮಾಡುತ್ತೇನೆಂದು ನಿನ್ನೆ ರಾತ್ರಿವರೆಗೂ ಡಿಕೆಶಿಯಿಂದ ಬೆದರಿಕೆ: ರಮೇಶ್ ಜಾರಕಿಹೊಳಿ ಆರೋಪ
ಬೆಳಗಾವಿ, ಮೇ 10: ‘ನಿನ್ನೆ ಮಧ್ಯರಾತ್ರಿಯ ವರೆಗೂ ಸೀಡಿ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು’ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ.
ಬುಧವಾರ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆ ಘೋಷಣೆ ಆದ ದಿನದಿಂದಲೂ ಡಿ.ಕೆ.ಶಿವಕುಮಾರ್ ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಲೇ ಇದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.
‘ಡಿ.ಕೆ.ಶಿವಕುಮಾರ್ ಸಿಡಿ ಮಾಡಿ ನೂರಾರು ಜನರ ಬಾಳು ಹಾಳು ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಾನು ಯಾರ ಬೆದರಿಕೆಗೂ ಹೆದರುವವನಲ್ಲ. ನನ್ನ ಬೆನ್ನಿಗೆ ನನ್ನ ಕುಟುಂಬ ಹಾಗೂ ಕ್ಷೇತ್ರದ ಜನರಿದ್ದಾರೆ. ಇವರ ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ’ ಎಂದು ಅವರು ತಿರುಗೇಟು ನೀಡಿದರು.
‘ಈ ಮೊದಲು ಡಿ.ಕೆ.ಶಿವಕುಮಾರ್ ಈಗಿನಂತಿರಲಿಲ್ಲ. ‘ವಿಷಕನ್ಯೆ’ಯ ಸಹವಾಸ ಡಿಕೆಶಿಯನ್ನು ಬದಲು ಮಾಡಿದೆ. ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನೂರಾರು ಜನರು ನೆಮ್ಮದಿಯ ಜೀವನ ಮಾಡುತ್ತಾರೆ ಎಂದ ಅವರು, ‘ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಮೇ 13ರಂದು ಅಭೂತಪೂರ್ವ ಫಲಿತಾಂಶದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ನುಡಿದರು.