ಮೈಸೂರು: ಮೋದಿ ರೋಡ್ ಶೋ ನಡೆಸಿದ್ದ ರಸ್ತೆಯನ್ನು ಗೋ ಮೂತ್ರದಿಂದ 'ಸ್ವಚ್ಛಗೊಳಿಸಿದ' ಸಿದ್ದರಾಮಯ್ಯ ಅಭಿಮಾನಿ
ಮೈಸೂರು,ಮೇ.14: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನ ಮಂತ್ರಿ ನರೆಂದ್ರ ಮೋದಿ ರಾಜಧಾನಿ ಬೆಂಗಳೂರು-ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ರೋಡ್ ಶೋ ನಡೆಸಿದ್ದರು. ಇದೀಗ ಮೋದಿ ರೋಡ್ ಶೋ ನಡೆಸಿದ ರಸ್ತೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಅಭಿಮಾನಿ ಕಂಸಾಳೆ ರವಿ ಎಂಬವರು ಗೋ ಮೂತ್ರದಿಂದ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.
ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ಸಯ್ಯಾಜಿರಾವ್ ರಸ್ತೆಗೆ ಕಾಂಗ್ರೆಸ್ ಕಾರ್ಯಕರ್ತರು ಸಗಣಿ ಗೋ ಮೂತ್ರ, ನೀರು ಹಾಕಿ ಸ್ವಚ್ಛ ಮಾಡಿದ್ದಾರೆ. ಚುನಾವಣೆ ಮೊದಲು ಮೈಸೂರಿನ ರಾಜಮಾಗದಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದರು. ಈ ಹಿನ್ನಲೆಯಲ್ಲಿ ರಸ್ತೆಗೆ ಮೈಸೂರು ಕಾಂಗ್ರೆಸ್ ಮುಖಂಡರುಗಳು ಸಗಣಿ ನೀರು ಹಾಕಿ ಸ್ವಚ್ಛಗೊಳಿಸುವ ಮೂಲಕ ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಕಂಸಾಳೆ ರವಿ, 'ಚುನಾವಣೆಗೂ ಮುನ್ನ ಮೈಸೂರಿನ ರಾಜ ಮಾರ್ಗದಲ್ಲಿ ಭರ್ಜರಿ ರೋಡ್ ಶೋ ಮೋದಿ ನಡೆಸಿದ್ದರು. ಅಂಬಾರಿ ಹಾದು ಹೋಗುವ ರಾಜ ಮಾರ್ಗದಲ್ಲಿ ಮೋದಿ ರೋಡ್ ಶೋ ಮಾಡಿದ್ದೆ ದೊಡ್ಡ ತಪ್ಪು. ಇದು ರಾಜ ಮನೆತನಕ್ಕೆ ಮಾಡಿದ ಅಪಮಾನ. ಅಂಬಾರಿ ಬಿಟ್ಟರೆ ಇನ್ಯಾವುದೇ ದೊಡ್ಡ ಮೆರವಣಿಗೆ ಇಲ್ಲಿ ಮಾಡಿರಲಿಲ್ಲ. ಆದರೆ ಹಿಂದುತ್ವದ ಹೆಸರೇಳುವ ಬಿಜೆಪಿಯವರು ನಾಡಹಬ್ಬಕ್ಕೆ ಅಪಮಾನ ಆಗುವ ಹಾಗೇ ರೋಡ್ ಶೋ ಮಾಡಿದ್ದಾರೆ. ಹಾಗಾಗಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಧೂಳಿಪಟ ಆಗಿದೆ. ಈ ರಸ್ತೆಗೆ ಆಗಿರುವ ಕೊಳೆಯನ್ನು ತೊಳೆಯಲು ಸಗಣಿ ನೀರು ಹಾಕಿ ಸ್ವಚ್ಛ ಮಾಡುತ್ತಿದ್ದೇವೆ' ಎಂದು ಹೇಳಿದರು.