ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ.ಕಾರ್ಯಪ್ಪ ರಾಜೀನಾಮೆ

Update: 2023-05-14 14:45 GMT

ಮೈಸೂರು,ಮೇ.14: ರಂಗಾಯಣ ಮೈಸೂರು ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ.ಕಾರ್ಯಪ್ಪ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂಬಂಧ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಲಿಖಿತ ರೂಪದಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ದಿ. 27.12.2019 ರಂದು ರಂಗಾಯಣ ಮೈಸೂರಿನ ನಿರ್ದೇಶಕರನ್ನಾಗಿ ನನ್ನನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ದಿನಾಂಕ 31.12.2019 ರಂದು ನಾನು ಅಧಿಕಾರ ಸ್ವೀಕರಿಸಿ ಅಂದಿನಿಂದ ಇಂದಿನವರೆಗೆ ಕಾಯಾ ವಾಚ ಮನಸಾ ನನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆ ಮತ್ರು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನೊಂದಿಗೆ ನನ್ನ ಈ ಅವಧಿಯಲ್ಲಿ ಸಹಕರಿಸಿದ ರಂಗಾಯಣದ ಎಲ್ಲಾ ಸಿಬ್ಬಂಧಿಗಳಿಗೆ, ಕಲಾವಿದರಿಗೆ, ಅಧಿಕಾರ ವರ್ಗಕ್ಕೆ, ಸಹೃದಯ ಪ್ರೇಕ್ಷಕರಿಗೆ, ನನ್ನ ಕಷ್ಟ ಕಾಲಗಳಲ್ಲಿ ನನ್ನೊಂದಿಗೆ  ಕೈಜೋಡಿಸಿದ ಎಲ್ಲರಿಗೆ, ಮಾಧ್ಯಮದ ಸ್ನೇಹಿತರಿಗೆ ನನ್ನ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Similar News