ಡಾ.ಕೆ ಸುಧಾಕರ್ ಗೆ ಸೋಲು; ಮನನೊಂದ ಅಭಿಮಾನಿ ಆತ್ಮಹತ್ಯೆ

Update: 2023-05-15 08:24 GMT

ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋತ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರ ಸೋಲಿನಿಂದ ಮನನೊಂದು ಅಂಧಾಭಿಮಾನಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ವಡ್ರೆಪಾಳ್ಯದಲ್ಲಿ ನಡೆದಿದೆ.

ನಗರದ ಕೋಟೆ ನಿವಾಸಿ ಚಿತ್ತಾರ ವೆಂಕಟೇಶ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸುಧಾಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಎಂದು ತಿಳಿದು ಬಂದಿದೆ.

ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಸುಧಾಕರ್ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಎದುರು ಸೋತಿದ್ದಾರೆ. ಹೊಸದಾಗಿ ರಾಜಕಾರಣಕ್ಕೆ ಸೇರಿ ಕೆಲವು ತಿಂಗಳ ಕಾಲ ಚುನಾವಣಾ ಪ್ರಚಾರ ಮಾಡಿದ್ದ ಪ್ರದೀಪ್ ಈಶ್ವರ್ ಸುಧಾಕರ್ ಅವರನ್ನು ಮಣಿಸಿದ್ದು ಅಚ್ಚರಿಗೆ ಕಾರಣವಾಗಿದೆ. 

ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಅವರು ಸೋತ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ್ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ವೆಂಕಟೇಶ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Similar News