ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ್ತೆ ಹೋಗುವುದಿಲ್ಲ: ಜಗದೀಶ್ ಶೆಟ್ಟರ್

Update: 2023-05-16 17:31 GMT

ಬೆಂಗಳೂರು, ಮೇ 16: ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ರಾಜ್ಯದಲ್ಲಿ ಇಡೀ ಬಿಜೆಪಿ ಸೋಲುವಂತಾಯಿತು. ಬಿಜೆಪಿ ಪಕ್ಷದ ಎಲ್ಲರೂ ನನ್ನ ವಿರುದ್ಧ ನಿಂತರೂ, ಅದರ ಫಲವಾಗಿ ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಿದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದ ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಲಾಗಿದೆ. ಯಾಕೆ ಟಾರ್ಗೆಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ನಾನು ಬಿಜೆಪಿ ಪಕ್ಷ ಬಿಟ್ಟು ಬಂದಿದ್ದು, ಮುಂದೆ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ್ತೆ ಹೋಗುವುದಿಲ್ಲ. ಕಾಂಗ್ರೆಸ್‍ನಲ್ಲೇ ಮುಂದುವರಿಯುತ್ತೇನೆ. ನಾನು ಪಕ್ಷ ಬಿಟ್ಟು ಹೊರಟಾಗ ಮಾತನಾಡಿಸಬೇಕೆಂಬ ಸಣ್ಣ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಫಲಿತಾಂಶ ಕಳೆದು ನಾನು ಬೆಂಗಳೂರಿಗೆ ಬಂದ ಮೇಲೆ ಸಾಕಷ್ಟು ಕಾಂಗ್ರೆಸ್ ನಾಯಕರು ಮನೆಗೆ ಬಂದು ಮಾತನಾಡಿಸಿ ಹೋಗಿದ್ದಾರೆ. ಡಾ.ಜಿ.ಪರಮೇಶ್ವರ್ ಮಾತನಾಡಿಸಿ ನೀವು ಪಕ್ಷಕ್ಕೆ ಬಂದ ಮೇಲೆ ಒಳ್ಳೆಯದಾಗಿದೆ ಎಂದಿದ್ದರು. ನಾನು ಬಂದ ಮೇಲೆ ಲಿಂಗಾಯತರ ಮತಗಳು ಕೂಡ ಬಂದಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಸಿಎಂ ಆಯ್ಕೆ ಗೊಂದಲ ವಿಚಾರ ಎಲ್ಲರ ಸಮ್ಮುಖದಲ್ಲಿ ತೀರ್ಮಾನ ಮಾಡಲಿ. ಯಾರಿಗೆ ಸೂಕ್ತ ಅಂತ ಹೇಳುತ್ತಾರೋ ಅವರಿಗೆ ಪಟ್ಟ ಸಿಗುವಂತಾಗಲಿ. ಸಚಿವ ಸಂಪುಟಕ್ಕೆ ನನ್ನನ್ನು ಕರೆದಿಲ್ಲ. ಹೋಗುವುದರ ಬಗ್ಗೆಯೂ ನಾನು ನಿರ್ಧಾರ ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. 

Similar News