ಈಜುಕೊಳದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು; ಪ್ರಕರಣ ದಾಖಲು

Update: 2023-05-20 14:33 GMT

ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಈಜುಕೊಳಕ್ಕೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬೀಡಿ ಲೇಔಟ್ ನಿವಾಸಿಗಳಾದ ಮುಬಾರಕ್(15), ತಾಜುದ್ದೀನ್(16) ಮೃತ ಬಾಲಕರು. ಈ ಸಂಬಂಧ ಮೃತ ಮುಬಾರಕ್ ತಂದೆ ಮುಕ್ತಿಯಾರ್ ಎಂಬುವರು ನೀಡಿದ ದೂರಿನ ಮೇರೆಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತರಾಗಿದ್ದ ಮುಬಾರಕ್ ಹಾಗೂ ತಾಜುದ್ದೀನ್ ಶುಕ್ರವಾರ ಸಂಜೆ ಈಜುಕೊಳಕ್ಕೆ ತೆರಳಿದ್ದಾರೆ.ಈಜುಕೊಳದ ಆಳವಾದ ಭಾಗಕ್ಕೆ ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ದೂರು ನೀಡಿರುವ ಮುಕ್ತಿಯಾರ್, ‘ನನ್ನ ಮಗ ಹಾಗೂ ಆತನ ಸ್ನೇಹಿತನ ಸಾವಿಗೆ ಮಹಾನಗರ ಪಾಲಿಕೆ ಹಾಗೂ ಈಜುಕೊಳ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ನಿಯಮದಂತೆ ಈಜುಕೊಳದಲ್ಲಿ ಕೈಗೊಳ್ಳಬೇಕಿರುವ ಯಾವುದೇ ಸುರಕ್ಷತಾ ಕ್ರಮಗಳನ್ನು ಸಿಬ್ಬಂದಿ ಕೈಗೊಂಡಿಲ್ಲ. ಸ್ವಿಮ್ಮಿಂಗ್‌ಪೂಲ್ ನಿರ್ವಹಣೆ ತಂಡದಲ್ಲಿ ಈಜು ತರಬೇತುದಾರರು ಇಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಸಿಬ್ಬಂದಿಯ ನಿರ್ಲಕ್ಷ್ಯವೇ ಮಕ್ಕಳ ಸಾವಿಗೆ ಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು,’ ಎಂದು ಮನವಿ ಮಾಡಿದ್ದಾರೆ.

Similar News