ಚಿಕ್ಕಮಗಳೂರು| ಮರ ಬಿದ್ದು ದ್ವಿಚಕ್ರ ವಾಹನ ಸವಾರ ಮೃತ್ಯು

Update: 2023-05-21 15:28 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ರವಿವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಗೆ ಮರ ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ಸವಾರ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ ನಡೆದಿದೆ. 

ಚಿಕ್ಕಳ್ಳ ಗ್ರಾಮದ ನಿವಾಸಿ ವೇಣುಗೋಪಾಲ್ (45) ಮೃತಪಟ್ಟವರು. ಗ್ರಾಮದಲ್ಲಿ ಹೋಮ್‍ಸ್ಟೇ ನಡೆಸುತ್ತಿದ್ದ ಅವರು, ರವಿವಾರ ಸಂಜೆ ವೇಳೆ ಮೂಡಿಗೆರೆಯ ತನ್ನ ಮನೆಯಿಂದ ಚಿಕ್ಕಳ್ಳದಲ್ಲಿರುವ ಹೋಮ್‍ಸ್ಟೇಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಈ ವೇಳೆ ದಿಢೀರ್ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಣುಗೋಪಾಲ್ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವೇಣುಗೋಪಾಲ್ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕ ಮೂಲದವರಾದ ವೇಣುಗೋಪಾಲ್ ಮೂಡಿಗೆರೆಯಲ್ಲಿ ನೆಲೆಸಿದ್ದರು. ಹೋಮ್ ಸ್ಟೇಯೊಂದಿಗೆ ಅವರು ಮೂಡಿಗೆರೆ ಪಟ್ಟಣದಲ್ಲಿ ಬಳೆ ಅಂಗಡಿಯನ್ನು ನಡೆಸುತ್ತಿದ್ದರು. ರವಿವಾರ ಸಂಜೆ ವೇಳೆ ಮೂಡಿಗೆರೆಯಿಂದ ಹೋಮ್ ಸ್ಟೇಗೆ ಹೋಗುತ್ತಿದ್ದ ವೇಳೆ ಮಳೆ, ಗಾಳಿಯ ಆರ್ಭಟಕ್ಕೆ ಮೂರು ಮರಗಳು ಏಕಕಾಲದಲ್ಲಿ ವೇಣುಗೋಪಾಲ್ ಅವರ ಮೇಲೆ ಉರುಳಿ ಬಿದ್ದ ಪರಿಣಾಮ ಮರದಡಿ ಸಿಲುಕಿದ ವೇಣುಗೋಪಾಲ್ ಸ್ಥಳದಲ್ಲೇ ವೃತಪಟ್ಟಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News