ಕಾಂಗ್ರೆಸ್‍ನ ಒಳಗೆ ಭೂಕಂಪನ ಆಗುವ ಮುನ್ಸೂಚನೆ ಕಾಣುತ್ತಿದೆ: ಸಿ.ಟಿ.ರವಿ

Update: 2023-05-23 15:48 GMT

ಚಿಕ್ಕಮಗಳೂರು: ಕಾಂಗ್ರೆಸ್ ಸರಕಾರದ ಆರಂಭದಲ್ಲೇ ಮುಖಂಡರ ಒಳಗೆ ಅಸಹನೆ ಕುದಿಯುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಒಳಗೆ ಭೂಕಂಪ ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ ಎಂದು ಬಿಜೆಪಿ ರಾ ಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಂಗಳವಾರ ಎಂ.ಬಿ.ಪಾಟೀಲ್ ಹೇಳಿಕೆ ಸಂಬಂಧ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಅಸಹನೆ ಭೂಕಂಪ ಕಾಂಗ್ರೆಸ್ ಪಕ್ಷವನ್ನೇ ದುರ್ಬಲಗೊಳಿಸುವ ಭೂಕಂಪ ಆಗಬಹುದು. ಸಿದ್ದರಾಮಯ್ಯ ಅವರು ಈಗ ತಾನೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾರೆ. ಈಗಲೇ ಏಕೆ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆಯಾಗುತ್ತಿದೆ ಗೊತ್ತಾಗುತ್ತಿಲ್ಲ. ಇದನ್ನು ಗಮನಿಸಿದಾಗ ಒಳಗೆ ಏನೋ ನಡೆಯುತ್ತಿದೆ ಅನಿಸುತ್ತಿದೆ. ಪಕ್ಷದಲ್ಲಿ ಅಸಹನೆ ಹುಟ್ಟುವುದು ಕಡೆ ವರ್ಷದಲ್ಲಿ, ಆರಂಭದಲ್ಲೇ ಒಳಗೆ ಕುದಿಯುತ್ತಿದೆ ಎಂದರೇ ಭೂಕಂಪದ ಮುನ್ಸೂಚನೆ ಕಾಣುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಾರು ಎಂಬ ವಿಚಾರಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ನಾವು ವಿರೋಧ ಪಕ್ಷದಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿ ಎಂದರು.

Similar News