ಮಾಲಕರು-ನೌಕರರು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

Update: 2023-05-25 13:51 GMT

ಬೆಂಗಳೂರು, ಮೇ 25: ಮಾಲಕರು ಮತ್ತು ನೌಕರರು ರಾಜಿ ಸಂಧಾನದ ಮೂಲಕ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಇಂಡಿಯನ್ ಟೆಲಿಫೋನ್ ಲಿಮಿಟೆಡ್‍ನಲ್ಲಿ (ಐಟಿಐ) ಹಲವು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 80 ನೌಕರರ ಮರು ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಬಾರಿ ರಾಜಿ ಸಂಧಾನ ನಡೆಸಲು ಕೋರ್ಟ್ ಸೂಚನೆ ನೀಡಿದೆ.

ಕರ್ನಾಟಕ ಜನರಲ್ ಲೇಬರ್ ಯೂನಿಯನ್‍ನ ಐಟಿಐ ಘಟಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ರಾಜಿ ಅಧಿಕಾರಿ ಚರ್ಚೆ ನಡೆಸಿ ಕೆಲವು ಸಿಬ್ಬಂದಿಯನ್ನು ಉದ್ಯೋಗಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಶಿಫಾರಸು ಮಾಡಿದೆ.

35 ನೌಕರರನ್ನು ತಕ್ಷಣ ಸೇವೆಗೆ ಪರಿಗಣಿಸಬೇಕು. 45 ನೌಕರರನ್ನು ಹಂತ ಹಂತವಾಗಿ ಪರಿಗಣಿಸಬೇಕು ಎಂಬ ಮಧ್ಯಂತರ ಪರಿಹಾರವನ್ನು ಜಾರಿ ಮಾಡಬೇಕು. ಮುಂದೆ ನಡೆಯುವ ರಾಜಿ ಪ್ರಕ್ರಿಯೆಯಲ್ಲಿ ಪ್ರಕರಣ ಸಂಬಂಧ ಮತ್ತಷ್ಟು ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

Similar News