ನೂತನ ಶಾಸಕ ಎಚ್.ಡಿ ತಮ್ಮಯ್ಯಗೆ ಮಾಜಿ ಶಾಸಕ ಸಿ.ಟಿ.ರವಿ ಬಹಿರಂಗ ಪತ್ರ

Update: 2023-05-27 18:37 GMT

ಚಿಕ್ಕಮಗಳೂರು, ಮೇ 27: ಮಾಜಿ ಶಾಸಕ ಸಿ.ಟಿ.ರವಿ ಅವರು ಹಾಲಿ ಕಾಂಗ್ರೆಸ್ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಈಗಾಗಲೇ ನಾವು ಚಿಕ್ಕಮಗಳೂರು ಜಿಲ್ಲೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಜನಪರ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದು, ಅದರಲ್ಲಿ ಹಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ. ಇನ್ನು ಹಲವು ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಆದರೆ, ಈ ನಡುವೆ ಬಂದ ನೂತನ ಸರಕಾರ ತೆಗೆದುಕೊಂಡ ಈ ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿಯುವ ಆದೇಶ ಕಂಡು ಜಿಲ್ಲೆಯ ಅಭಿವೃದ್ಧಿಗೆ ಗ್ರಹಣ ಬಂದಿತು ಎಂದನಿಸಿ ತಮಗೆ ಈ ಪತ್ರವನ್ನು ಬರೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರ ಯಾವುದೇ ಪಕ್ಷ ಇರಲಿ. ಅದೊಂದು ಸಂವಿಧಾನದ ಆಶಯದಂತೆ ಚುನಾಯಿತ ಜನತಾ ಸರಕಾರ ಆಗಿರುತ್ತದೆ. ಸರಕಾರ ನಡೆಸುವವರು ಜನರ ತೆರಿಗೆ ಹಣದಲ್ಲಿ ಜನರ ಕಲ್ಯಾಣಕ್ಕಾಗಿಯೇ ಅಭಿವೃದ್ಧಿ ಕಾರ್ಯಗಳನ್ನು ಕಾನೂನಿನ ಅಡಿಯಲ್ಲಿ ನಿರ್ವಹಿಸುವುದು ಚುನಾಯಿತ ಸರಕಾರದ ಕರ್ತವ್ಯ ಆಗಿರುತ್ತದೆ. ಸರಕಾರ ಬದಲಾವಣೆಯಾದರೆ ಚುನಾಯಿತ ಪ್ರತಿನಿಧಿಗಳು, ಪಕ್ಷಗಳು ಬದಲಾಗುತ್ತವೇ ಹೊರತು ಆಡಳಿತ ಪಕ್ಷದ ಮೂಗಿನ ನೇರಕ್ಕೆ ಪೂರ್ಣ ಕಾನೂನುಗಳು ಮತ್ತು ಮೂಲಭೂತ ಸೌಕರ್ಯದಡಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಬದಲಾಗುವುದಿಲ್ಲ, ಬದಲಾಗಲೂಬಾರದು ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಹಿಂದೆ ಮಂಜೂರಾಗಿರುವ ಕಾಮಗಾರಿಗಳಿಗೆ ತಡೆ ಹಾಕದೆ ಕ್ಷೇತ್ರ ಹಾಗೂ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಂಜೂರಾಗಿರುವ ಹಾಗೂ ಪ್ರಾರಂಭವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ತಮ್ಮ ಮೇಲೆ ಇದ್ದು, ತ್ವರಿತಗತಿಯಲ್ಲಿ ಈ ಹಿಂದಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಹಕರಿಸುವಂತೆ ಆಶಿಸುವುದಾಗಿ ಹೇಳಿದ್ದಾರೆ.

ಜಿಲ್ಲೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಹಿಂದೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ವಿಶೇಷ ಅನುದಾನಗಳಲ್ಲಿ ತಂದಿದ್ದು, ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ವೇಗದ ಗತಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದಿದ್ದಾರೆ.

ಬಯಲುಸೀಮೆ ಭಾಗದ ಜನರ ಬಹು ಬೇಡಿಕೆಯಾಗಿದ್ದ ಬೈರಾಪುರ ಪಿಕಪ್‌ನಿಂದ ಕಣಿವೆದಾಸರಹಳ್ಳಿ ಕೆರ ಹಾಗೂ ಹಿರೇಮಗಳೂರು ಕೆರೆಯಿಂದ ಲಕ್ಷ್ಯ ಮಾದರಸನ ಕೆರೆ ತುಂಬಿಸುವುದನ್ನು ಕರಗಡ ಎರಡನೇ ಹಂತದ ಯೋಜನೆಯ ಮೂಲಕ ಈಗಾಗಲೇ ಸರಣಿ ಕೆರೆ ತುಂಬಿಸಿದ್ದು, ಕಾಲಕಾಲಕ್ಕೆ ಕೆರೆಗಳನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಭದ್ರಾ ನದಿ, ಗೋಂದಿ ಯೋಜನೆಯ ಮೂಲಕ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಪಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕಿದೆ ಹಾಗೂ ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿ ಪ್ರಾರಂಭಿಸುವ ಜವಾಬ್ದಾರಿ ತಮ್ಮ ಮೇಲಿದೆ. ರಣಘಟ್ಟದಿಂದ ಬೆಳವಾಡಿ ಕೆರೆ ತುಂಬಿಸುವ ಯೋಜನೆ ಕಾಮ ಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಳಿಸಬೇಕಿದೆ. ಭದ್ರಾ ಅಣೆಕಟ್ಟಿನ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೇಂದ್ರಸರಕಾರದ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸಬೇಕಿದೆ ಎಂದು ತಮ್ಮ ಅವಧಿಯ ಕಾಮಗಾರಿಯ ವಿವರ ನೀಡಿದ್ದಾರೆ.

ಕ್ಷೇತ್ರದ ಸರ್ವ ಜನಾಂಗಕ್ಕಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ಮಾಡಲು ಅನಕೂಲವಾಗುವಂತ ಲೋಕೋಪಯೋಗಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಟ್ಟು 192 ಸಮುದಾಯ ಭವನಕ್ಕೆ 35 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿದ್ದು ಹಲವಾರು ಕಾಮ ಗಾರಿ ಪೂರ್ಣಗೊಂಡಿದೆ. ಮಂಜೂರಾದ ಕೆಲವು ಕಾಮ ಗಾರಿಗಳು ಬಾಕಿಯಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಬೇಕಾಗಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ವರ್ಗದವ ರಿಗೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಿಗಾಗಿ 48 ನೂತನ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 7.50 ಕೋಟಿ ರೂ. ಹಣ ಮಂಜೂ ರು ಮಾಡಿಸಿದ್ದೇವೆ. ಅದಲ್ಲದೆ ಜಿಲ್ಲಾ ಕೇಂದ್ರದ ನಗರದಲ್ಲಿ 9 ಕೋಟಿ ರೂ. ಮೊತ್ತದ ಅಂಬೇಡ್ಕರ್ ಭವನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಬೇಕಿದೆ. ಇದರಲ್ಲಿ ಹಲವಾರು ಕಾಮ ಗಾರಿಗಳು ಪ್ರಾರಂಭಗೊಂಡಿದ್ದು, ಉಳಿದ ಮಂಜೂರಾದ ಕಾಮ ಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ನಗರದ ಬಸವನಹಳ್ಳಿ ಕೆರೆ ಸೌಂದ ರ್ಯಿಕರಣಗೊಳಿಸುವ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲು ಕ್ರಮ ವಹಿಸಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಅರಣ್ಯಭವನ ಹೀಗೆ ಹಲವಾರು ಸರಕಾರಿ ಕಟ್ಟ ಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿ ಸಲು ಕ್ರಮವಹಿಸಬೇಕಾಗಿದೆ ಎಂದಿರುವ ಸಿ.ಟಿ.ರವಿ, ಈಗ ಬಂದಿರುವ ನೂತನ ಸರಕಾರ ಮಾಡಿರುವ ಕಾಮಗಾರಿಗಳನ್ನು ತಡೆಹಿಡಿಯುವ ಆದೇಶ ಜನರ ಹಾಗೂ ಜಿಲ್ಲೆಯ ಅಭಿವೃ ದ್ಧಿಯ ಮೇಲೆ ಪರಿಣಾಮ ಬೀರಲಿದೆ. ಈ ಹಿಂದಿನ ಸರಕಾರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಡೆಯುವ ಕಾಂಗ್ರೆಸ್ ಸರಕಾರದ ಆದೇಶ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆಯಾಗುತ್ತದೆ ಎಂದು ಟೀಕಿಸಿದ್ದಾರೆ.

ನೀವು ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಈಗಾಗಲೇ ಮಂಜೂರಾಗಿರುವ ಅನುದಾನವನ್ನು ಸದ್ಬಳಕೆ ಮಾಡಿ ತ್ವರಿತಗತಿಯಲ್ಲಿ ಕಾಮಗಾರಿ ಯನ್ನು ಪ್ರಾರಂಭಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದಿದ್ದಾರೆ.

ರಾಜಧರ್ಮ ಎಲ್ಲರಲ್ಲೂ ಇರಲಿ. ದ್ವೇಷ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡುವುದು ನಮ್ಮ, ನಿಮ್ಮೆಲ್ಲರ ಆದ್ಯತೆಯಾಗಿರಲಿ. ಅಭಿವೃದ್ಧಿಯ ಕಡೆ ಗಮನ ನೀಡಬೇಕೆಂದ ಸಿ.ಟಿ.ರವಿ, ಜಿಲ್ಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕಾರ್ಯಕ್ಕೆ ಸದಾ ಬೆಂಬಲವಿರುತ್ತದೆ ಎಂದು ತಮ್ಮ ದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.

Similar News