ಮಗಳ ಹುಟ್ಟುಹಬ್ಬಕ್ಕೆ ಆಹ್ವಾನ; ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ!

Update: 2023-05-28 11:11 GMT

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಅವರು ಹೊರಡಿಸಿರುವ ಸುತ್ತೋಲೆಯೊಂದು ವಿವಾದಕ್ಕೆ ಕಾರಣವಾಗಿದೆ.

ರವಿವಾರ (ಮೇ 28) ಮಧ್ಯಾಹ್ನ ವೀರಭದ್ರಪ್ಪ ಅವರು ತನ್ನ ಪುತ್ರಿಯ ಜನ್ಮದಿನದ ನಿಮಿತ್ತ ಸಂತೋಷಕೂಟ ಆಯೋಜನೆ ಮಾಡಿದ್ದರು. ಅದಕ್ಕಾಗಿ ವಿವಿಯಿಂದಲೇ ಸಂತೋಷ ಕೂಟಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದ್ದಾರೆ. 

ಕುವೆಂಪು ವಿವಿ ಲೋಗೋ ಇರುವ ಸರಕಾರಿ ಲೆಟರ್‌ ಹೆಡ್ ನಲ್ಲೇ ಸುತ್ತೋಲೆ ಹೊರಡಿಸಿರುವ ಅವರು ಎಲ್ಲಾ ನೌಕರ ,ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದಾರೆ.

ಕುಲಪತಿಗಳ ಸುತ್ತೋಲೆ ಮೇರೆಗೆ ಹಲವರು ನೌಕರರು ಹಾಗೂ ಅಧ್ಯಾಪಕರು ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ನೂತನ ಶಾಸಕ ಎಚ್.ಡಿ ತಮ್ಮಯ್ಯಗೆ ಮಾಜಿ ಶಾಸಕ ಸಿ.ಟಿ.ರವಿ ಬಹಿರಂಗ ಪತ್ರ

► ಸುತ್ತೋಲೆಯಲ್ಲೇನಿದೆ?

''ನನ್ನ ಮಗಳು ಕು. ಆಕಾಂಕ್ಷ ಬಿ.ವಿ. - ಇವರ ಜನ್ಮ ದಿನದ ಪ್ರಯುಕ್ತ ದಿನಾಂಕ:28-05-2023ರ ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕುಲಪತಿಗಳ ಗೃಹದಲ್ಲಿ ಸಂತೋಷಕೂಟವನ್ನು ಏರ್ಪಡಿಸಿದೆ. ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಅತಿಥಿ ಉಪನ್ಯಾಸಕರು, ಏಜನ್ಸಿ ನೌಕರರು ತಪ್ಪದೇ ಹಾಜರಾಗಬೇಕೆಂದು ಕೋರಲಾಗಿದೆ. ಇದನ್ನು ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಈ ಸಂತೋಷಕೂಟದಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ'' ಎಂದು ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೂ ಸುತ್ತೋಲೆ ಹೊರಡಿಸಿದ್ದಾರೆ.

Similar News