ದಾವಣಗೆರೆ: ಪತ್ನಿ, ಮಗಳ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2023-05-29 14:30 GMT

ದಾವಣಗೆರೆ: ಪತ್ನಿಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ, ಬಳಿಕ 2 ವರ್ಷದ ಪುತ್ರಿಯನ್ನು ನೇಣು ಹಾಕಿ ಹತ್ಯೆಗೈದಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ.

ಮಾಯಕೊಂಡ ಗ್ರಾಮದ ನಾಗರಾಜ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.

2018ರ ಏ.19ರಂದು ನಾಗರಾಜ ತನ್ನ ಪತ್ನಿ ಶಿಲ್ಪಾ ಹಾಗೂ ಪುತ್ರಿ ಕೃತಿಕಾರನ್ನು ಕೊಲೆ ಮಾಡಿದ್ದ. 2015-16ರಲ್ಲಿ ಶಿಲ್ಪಾ ಹಾಗೂ ನಾಗರಾಜ ವಿವಾಹವಾಗಿದ್ದು, 2 ವರ್ಷದ ಕೃತಿಕಾ ಎಂಬ ಹೆಣ್ಣು ಮಗು ಇತ್ತು. ಪತ್ನಿಯ ಶೀಲದ ಬಗ್ಗೆ ಅನುಮಾನ ಪಡುತ್ತಿದ್ದ ನಾಗರಾಜ, ಈ ವಿಷಯವಾಗಿ ಶಿಲ್ಪಾ ಜತೆ ಜಗಳ ಮಾಡುತ್ತಿದ್ದ.

ಈ ನಡುವೆ 2018ರ ಏ.19ರಂದು ಬೆಳಗಿನಜಾವ 5.30ಕ್ಕೆ ನಾಗರಾಜ ಮತ್ತೆ ಶಿಲ್ಪಾ ಜತೆ ಜಗಳ ಮಾಡಿದ್ದಾನೆ. ಈ ವೇಳೆ ಸ್ನಾನಗೃಹದತ್ತ ಹೋಗುತ್ತಿದ್ದ ಶಿಲ್ಪಾಳನ್ನು ತಳ್ಳಿ ಬೀಳಿಸಿದ ಆರೋಪಿ, ಪಕ್ಕದಲ್ಲಿ ಬಿದ್ದಿದ್ದ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಬಳಿಕ ಅದೇ ಹಗ್ಗದಿಂದ ಶವವನ್ನು ನೇಳು ಬಿಗಿದ ಸ್ಥಿತಿಯಲ್ಲಿ ನೇತುಹಾಕಿದ್ದ. ನಂತರ ಪುತ್ರಿ ಕೃತಿಕಾಳನ್ನೂ ನೇಣು ಬಿಗಿದು ಹತ್ಯೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಮುಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ, ಹಿತ್ತಲ ಬಾಗಿಲಿನಿಂದ ಹೊರ ಹೋಗಿದ್ದ.

ಈ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿ ಗುರುಬಸವರಾಜ್ ತನಿಖೆ ನಡೆಸಿ ನಾಗರಾಜನ ವಿರುದ್ಧ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Similar News