ಕಡೂರು | ನ್ಯಾಯಬೆಲೆ ಅಂಗಡಿಯಲ್ಲಿ ಬಡವರ ಅಕ್ಕಿಗೆ ಕನ್ನ ಆರೋಪ; ಪರವಾನಿಗೆ ರದ್ದತಿಗೆ ಸ್ಥಳೀಯರ ಆಗ್ರಹ

Update: 2023-05-29 18:09 GMT

ಚಿಕ್ಕಮಗಳೂರು, ಮೇ 29: ವನಮಾಲಾ ದೇವರಾಜ್ ಎಂಬವರ ಮಾಲಕತ್ವದ ನ್ಯಾಯಬೆಲೆ ಅಂಗಡಿಯಲ್ಲಿ ಬಡ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವ ಘಟನೆ ವರದಿಯಾಗಿದ್ದು, ಬಡ ಕುಟುಂಬಗಳ ಪಡಿತರಕ್ಕೆ ಕನ್ನ ಹಾಕುತ್ತಿರುವ ಈ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಬಿಜೆಪಿಯ ಜಿಲ್ಲಾ ಮಟ್ಟದ ನಾಯಕಿ ವನಮಾಲಾ ದೇವರಾಜ್ ಎಂಬವರು ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು, ನ್ಯಾಯಬೆಲೆ ಅಂಗಡಿ ಸಂಖ್ಯೆ-130 ಆಗಿದೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರ ಬಡವರಿಗೆ ನೀಡುವ ಅಕ್ಕಿಗೆ ಕನ್ನ ಹಾಕುವ ಮೂಲಕ ಬಡವರಿಗೆ ನೀಡುವ ಅಕ್ಕಿಯಲ್ಲಿ ಪ್ರತೀ ಪಡಿತರ ಚೀಟಿದಾರರಿಂದ ತಲಾ 1 ಕೆ.ಜಿ. ಅಕ್ಕಿಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸಂಬಂಧ ಸ್ಥಳೀಯರು ನ್ಯಾಯಬೆಲೆ ಅಂಗಡಿಯಲ್ಲಿ ಬಡ ಪಡಿತರ ಚೀಟಿದಾರರ ಎದುರೇ ತೂಕದ ಯಂತ್ರದ ಮೇಲೆ 1ಕೆ.ಜಿ. ತೂಕದ ಕಲ್ಲನ್ನಿಟ್ಟು ಅಕ್ಕಿಯನ್ನು ತೂಕ ಮಾಡಿ ಮೋಸ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಈ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ನೀಡುವ ಅಕ್ಕಿಯನ್ನು ಲೂಟಿ ಮಾಡುತ್ತಿದ್ದು, ಗ್ರಾಹಕರ ಕಣ್ಣೆದುರೇ 1ಕೆ.ಜಿ. ಅಕ್ಕಿಗೆ ಕನ್ನ ಹಾಕುತ್ತಿದ್ದರೂ ಗ್ರಾಹಕರು ಈ ಬಗ್ಗೆ ತಕರಾರು ತೆಗೆಯದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲಕರು ರಾಜಾರೋಷವಾಗಿ ಬಡವರ ಅಕ್ಕಿ ಲೂಟಿ ಮಾಡುತ್ತಿದ್ದಾರೆ. ಅಂಗಡಿ ಮಾಲಕರು ಗ್ರಾಹಕರಿಗೆ ತೂಕದಲ್ಲಿ ಮಾಡುತ್ತಿರುವ ಮೋಸದ ಬಗ್ಗೆ ಪ್ರಶ್ನೆ ಮಾಡುವವರಿಗೆ ಸಬೂಬು ಹೇಳಿ ಸರಿಯಾಗಿ ತೂಕ ಮಾಡಿ ಪಡಿತರ ನೀಡುತ್ತಾರೆ. ಮೋಸವನ್ನು ಪ್ರಶ್ನಿಸದ ಅಮಾಯಕರ ಅಕ್ಕಿಯನ್ನು ಅವರ ಕಣ್ಣೆದುರೇ ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಗ್ರಾಮದಲ್ಲಿ ಬಹುತೇಕ ಪಡಿತರ ಚೀಟಿದಾರರು ಅಮಾಯಕರಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲಕರು ತೂಕದಲ್ಲಿ ಮೋಸ ಮಾಡಿ ಪ್ರತೀ ಪಡಿತರ ಚೀಟಿದಾರರಿಂದ ತಲಾ 1 ಕೆ.ಜಿ.ಯಂತೆ ಅಕ್ಕಿಗೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ತೂಕದಲ್ಲಿ ಮೋಸ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇನ್ನಾದರೂ ಅಧಿಕಾರಿಗಳು ಪರಿಶೀಲಿಸಿ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದು ಮಾಡಿ ಬಡಜನರ ಅಕ್ಕಿಯ ಲೂಟಿಯನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Similar News