ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರಿಯತಮನ ಮೇಲೆ ಬಿಸಿ ನೀರು ಸುರಿದ ಪ್ರಿಯತಮೆ..!

Update: 2023-05-30 13:38 GMT

ಬೆಂಗಳೂರು: ಮದುವೆಯಾಗಲು  ನಿರಾಕರಿಸಿದ ಪ್ರಿಯತಮನ ಮೇಲೆ ಸಿಟ್ಟಿಗೆದ್ದ  ಮಹಿಳೆ ಬಿಸಿ ನೀರು ಎರೆಚಿದ ಘಟನೆ ಚಾಮರಾಜ ಪೇಟೆಯಲ್ಲಿ ಮೇ 25 ರಂದು ನಡೆದಿದ್ದು  ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಜಿಲ್ಲೆಯ ವಿಜಯಶಂಕರ ಆರ್ಯ ಸಂತ್ರಸ್ತ ಯುವಕ.

ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ವಿಜಯಶಂಕರ ಆರ್ಯ ಖಾಸಗಿ‌ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ, ಖಾಸಗಿ ಆಸ್ಪತ್ರೆ ಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಪ್ಜಲ್ಪುರ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಎಂಬಾಕೆಯ ಮೇಲೆ ಪ್ರೇಮಾಂಕುರವಾಗಿತ್ತು.

ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರ ನಡುವೆ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಜ್ಯೋತಿಗೆ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದ ಮಾಹಿತಿ ಕಳೆದ ಎರಡು ತಿಂಗಳ ಹಿಂದಷ್ಟೇ ವಿಜಯಶಂಕರ್ ಗೆ ಗೊತ್ತಾಗಿದೆ. ಇದರಿಂದ ಬೇಸತ್ತ ವಿಜಯ್ ಆಕೆಯೊಂದಿಗಿನ ಸಂಬಂಧ ಕೊನೆಗೊಳಿಸಿ ಬೇರೆ ಮದುವೆಯಾಗಿದ್ದ. ಇದರಿಂದ ಕೋಪಗೊಂಡ  ಜ್ಯೋತಿ ನಿನ್ನೊಂದಿಗೆ ಕೊನೆ ಮಾತು ಆಡಬೇಕೆಂದು ವಿಜಯ್ ನನ್ನು ತನ್ನ ಮನೆಗೆ ಕರೆಸಿಕೊಂಡು ಬಿಸಿ ನೀರು ಎರಚಿದ್ದಾಳೆ ಎನ್ನಲಾಗಿದೆ.

ಬಿಸಿ ನೀರು ಎರಚಿದ ಪರಿಣಾಮ ವಿಜಯ್ ಶಂಕರ್ ನ ದೇಹದ ಹೆಚ್ಚಿನ ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ. ಮಾಹಿತಿ ತಿಳಿದ ಸ್ಥಳೀಯರು ಆತನನ್ನು ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಿದ್ದು, ವಿಜಯ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಜ್ಯೋತಿ ವಿರುದ್ಧ ಚಾಮರಾಜಪೇಟೆ‌ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಹುಡುಕಾಟದಲ್ಲಿ ನಿರತರಾಗಿದ್ದಾರೆ.

Similar News