ಅನ್ನಭಾಗ್ಯ ಯೋಜನೆ ಸಂಬಂಧ ಕೇಂದ್ರ ಸರಕಾರ ಅಕ್ಕಿ ಕೊಡದಿದ್ದಲ್ಲಿ ಟೆಂಡರ್ ಕರೆಯುತ್ತೇವೆ: ಸಚಿವ ಕೆ.ಎಚ್. ಮುನಿಯಪ್ಪ

Update: 2023-05-30 16:25 GMT

ಬೆಂಗಳೂರು: ರಾಜ್ಯ ಸರಕಾರದ ಮಹತ್ವದ ಅನ್ನಭಾಗ್ಯ ಯೋಜನೆ ಸಂಬಂಧ ಕೇಂದ್ರ ಸರಕಾರ ಅಕ್ಕಿ ಕೊಡದೇ ಹೋದಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲು ಕೇಂದ್ರ ಸರಕಾರದ ಬಳಿ ಅಕ್ಕಿಯನ್ನು ಕೇಳುತ್ತೇವೆ. ಈಗ ಯಾವ ದರದಲ್ಲಿ ಅಕ್ಕಿ ಕೊಡುತ್ತಾರೆ ಅದೇ ದರದಲ್ಲಿ ನೀಡುವಂತೆ ಮನವಿ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೇಂದ್ರಕ್ಕೆ ಪತ್ರವನ್ನು ಬರೆಯುತ್ತಾರೆ. ಒಂದು ವೇಳೆ, ಕೇಂದ್ರ ಸರಕಾರ ಅಕ್ಕಿ ಕೊಡದೇ ಹೋದಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.

ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ಕೊಡುವ ವಿಶ್ವಾಸ ಇದೆ. ಪ್ರತಿ ಕೆಜಿಗೆ 34 ರೂಪಾಯಿ ವೆಚ್ಚ ತಗಲುತ್ತದೆ ಎಂದ ಅವರು, ರಾಜ್ಯದಲ್ಲಿ 14,38,796 ಎಪಿಎಲ್ ಕಾರ್ಡ್ ಹೊಂದಿದವರಿದ್ದು, ಒಂದು ವೇಳೆ ಕೇಂದ್ರ ಸರಕಾರ ಅಕ್ಕಿ ಕೊಡಲಿ ಬಿಡಲಿ ನಾವು ಟೆಂಡರ್ ಕರೆದು ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ತಿಳಿಸಿದರು. 

ಹೊಸ ಕಾರ್ಡ್‍ಗಳಿಗೆ ಬೇಡಿಕೆ ಬರುತ್ತಿದೆ. ಈ ನಿಟ್ಟಿನಲ್ಲಿ ಮಾನದಂಡಗಳನ್ನು ಆಧರಿಸಿ ಹೊಸ ಕಾರ್ಡ್ ವಿತರಣೆ ಮಾಡುತ್ತೇವೆ. ನಕಲಿ ಕಾರ್ಡ್‍ಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದೂ ಅವರು ಉಲ್ಲೇಖಿಸಿದರು.

Similar News