ಚಿಕ್ಕಮಗಳೂರು: ಮದ್ಯಪಾನ ಮಾಡಿ ಅನಾರೋಗ್ಯ ನಾಟಕವಾಡಿದ ವೈದ್ಯ; ಆರೋಪ

ಸಾರ್ವಜನಿಕರ ಆಕ್ರೋಶ

Update: 2023-06-01 06:07 GMT

ಚಿಕ್ಕಮಗಳೂರು: ಆಪರೇಷನ್ ಮಾಡಲು ಬಂದ ವೈದ್ಯ ಪಾನಮತ್ತನಾಗಿ ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ್ದಾರೆ ಎಂದು ಆರೋಪಿಸಲಾದ  ಘಟನೆ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪಾನಮತ್ತರಾಗಿ ಬಂದ ವೈದ್ಯನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಯ ಡಾ. ಬಾಲಕೃಷ್ಣ ಎಂದು ಗುರುತಿಸಲಾಗಿದೆ.

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಾಡು ಮಾಡಲಾಗಿದ್ದ ಸಂತಾನಹರಣ ಆಪರೇಷನ್ ಕ್ಯಾಂಪ್ ಗೆ ಮಹಿಳೆಯರನ್ನು ಬೆಳಗ್ಗೆ 8 ಗಂಟೆಗೆ ಬರಲು ಹೇಳಿದ್ದರು. 10ಕ್ಕೂ ಹೆಚ್ಚು ಮಹಿಳೆಯರು ಮಕ್ಕಳನ್ನ ಬಿಟ್ಟು ಬೆಳಗ್ಗೆ 8 ಗಂಟೆಗೆ ಬಂದಿದ್ದರು. ಆದರೆ ವೈದ್ಯ ಆಸ್ಪತ್ರೆಗೆ ತಲುಪುವಾಗ ಮಧ್ಯಾಹ್ನ 3 ಗಂಟೆಯಾಗಿದ್ದು, ಬರುವಾಗಲೇ  ಪಾನಮತ್ತರಾಗಿ ತೂರಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಆಪರೇಷನ್ ಗಾಗಿ ಅನಸ್ತೇಷಿಯಾ ಪಡೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ವೈದ್ಯನನ್ನು ಸಾರ್ವಜನಿಕರಿಂದ ಕಾಪಾಡಲು ಯತ್ನಿಸಿದ ಸಿಬ್ಬಂದಿ’ ವೈದ್ಯರಿಗೆ ಏನೋ ಆಗಿದೆ, ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ’ ಎಂದು ನಾಟಕವಾಡಿದ್ದಾರೆ. ಇಂದು ಬೇರೆ ವೈದ್ಯರನ್ನು ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Similar News