ಹಾಸನ: ಸಂಬಳ ನೀಡದೆ ದುಡಿಸಿಕೊಳ್ಳುತ್ತಿದ್ದ ಆರೋಪಿಗಳಿಬ್ಬರ ಬಂಧನ; 19 ಮಂದಿ ಕೂಲಿ ಕಾರ್ಮಿಕರ ರಕ್ಷಣೆ
Update: 2023-06-01 08:54 GMT
ಹಾಸನ, ಮೇ 31: ಕೂಲಿ ಕಾರ್ಮಿಕರಿಗೆ ಸಂಬಳ ನೀಡದೆ ಬಲವಂತದಿಂದ ಬೆದರಿಸಿ ದುಡಿಸಿಕೊಳ್ಳುತ್ತಿದ್ದ ಅರಸೀಕೆರೆ ತಾಲೂಕಿನ ಮೇಗಳಹಳ್ಳಿಯ ಮುನೇಶ ಮತ್ತು ಅನಿಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಆರೋಪಿಗಳು ಅರಸೀಕೆರೆ ತಾಲೂಕು, ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದಲ್ಲಿ 19 ಮಂದಿ ಕೂಲಿ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಿಕೊಂಡು ಅವರಿಗೆ ಸಂಬಳ ನೀಡುತ್ತಿರಲಿಲ್ಲ. ಈ ಬಗ್ಗೆ ಬಾಣಾವರ ಪೊಲೀಸ್ ಠಾಣೆಯ ಪಿಎಸ್ಸೈ ಅಭಿಜಿತ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ವಿಚಾರಣೆ ವೇಳೆ ಆರೋಪಿಗಳಿಂದ 2 ತಲವಾರು, 10 ಪ್ಲಾಸ್ಟಿಕ್ ಬಕೆಟ್ಗಳು, ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.