ದಾವಣಗೆರೆ: ತಂದೆಯಿಂದ ಇಬ್ಬರು ಮಕ್ಕಳ ಹತ್ಯೆ

Update: 2023-06-01 16:41 GMT

ದಾವಣಗೆರೆ, ಜೂ.1: ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ಚಳಗೇರಿ ಟೋಲ್‌ಗೇಟ್ ಬಳಿ ವರದಿಯಾಗಿದೆ.

 ಗೋಕಾಕ್ ಮೂಲದ, ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಅಮರ್ (36) ಕೃತ್ಯವೆಸಗಿರುವ ಆರೋಪಿ. ಈತ ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

 ಆರೋಪಿಯು ಬುಧವಾರ ರಾತ್ರಿ 10:30ರ ವೇಳೆ ಚಳಗೇರಿ ಟೋಲ್ ಹತ್ತಿರದ ಸರ್ವಿಸ್ ರಸ್ತೆಯಲ್ಲಿ 4 ವರ್ಷದ ಅದ್ವೈತ್ ಮತ್ತು ಅನ್ವೀತ್ ಎಂಬ ಅವಳಿ ಮಕ್ಕಳನ್ನು ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ನಡೆಯುವ ವೇಳೆ ಪತ್ನಿ ಜಯಲಕ್ಷ್ಮೀ ತನ್ನ ತವರೂರು ವಿಜಯಪುರದಲ್ಲಿದ್ದರೆಂದು ತಿಳಿದು ಬಂದಿದೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಕ್ಕಳು ಸ್ವಲ್ಪ ಬುದ್ಧಿಮಾಂದ್ಯರಾಗಿದ್ದು, ಹಠ ಮಾಡುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದೆ ಅವರನ್ನು ಉಸಿರುಗಟ್ಟಿಸಿ ಕೊಂದು ಹಾಕಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.

Similar News