ಆಸ್ಪತ್ರೆಯ ನೋಂದಣಿ ರದ್ದು ಆದೇಶ: ಅನೂರ್ಜಿತಗೊಳಿಸಿದ ಹೈಕೋರ್ಟ್

Update: 2023-06-01 16:59 GMT

ಬೆಂಗಳೂರು, ಜೂ.1: ಕೊರೋನ ಸಂದರ್ಭದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿದ್ದ ರಾಜರಾಜೇಶ್ವರಿ ನಗರದ ಗುರುಶ್ರೀ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶವನ್ನು ಹೈಕೋರ್ಟ್ ಅನೂರ್ಜಿತಗೊಳಿಸಿದೆ.  ಆಸ್ಪತ್ರೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ತಿದ್ದುಪಡಿ ಪ್ರಕಾರ ಆಸ್ಪತ್ರೆಗಳ ನೋಂದಣಿ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರು ಮೂಲ ಪ್ರಾಧಿಕಾರವಾಗಿದ್ದಾರೆ. ಆದರೆ, ಇಲಾಖೆಯು ಅಧಿಕಾರ ವ್ಯಾಪ್ತಿ ಇಲ್ಲದೆ ನೋಂದಣಿಯನ್ನು ರದ್ದುಪಡಿಸಿದೆ ಎಂದು ಹೇಳಿದೆ. 

ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಅರ್ಜಿದಾರ ಆಸ್ಪತ್ರೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವುದು ಮತ್ತು ಸರಕಾರದಿಂದ ನಿಗದಿಪಡಿಸಿದ್ದ ಹಣಕ್ಕಿಂತ ಹೆಚ್ಚು ಶುಲ್ಕ ಪಡೆದುಕೊಂಡಿದ್ದ ಆರೋಪ ಎದುರಾಗಿತ್ತು. ಈ ಸಂಬಂಧ ರಾಜರಾಜೇಶ್ವರಿನಗರದ ಶಾಸಕ ಹಾಗೂ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಎನ್.ಮುನಿರತ್ನ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಸ್ಪತ್ರೆಯ ಪರವಾನಿಗೆ ರದ್ದು ಮಾಡುವಂತೆ ಸೂಚನೆ ನೀಡಿದ್ದರು.

ಈ ಪತ್ರವನ್ನು ಆಧರಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿ(ಮೂಲ ಪ್ರಾಧಿಕಾರ) ಪ್ರಕ್ರಿಯೆ ನಡೆಸಿ 2022ರ ಆ.20ರಂದು ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಿದ್ದರು. ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಂದೆ ಪ್ರಶ್ನಿಸಿದ್ದಾಗ ಇಲಾಖೆ ಜಿಲ್ಲಾಧಿಕಾರಿ ಆದೇಶವನ್ನು ಖಚಿತಪಡಿಸಿತ್ತು. ಅದನ್ನು ಪ್ರಶ್ನಿಸಿ ಆಸ್ಪತ್ರೆ ಹೈಕೋರ್ಟ್ ಮೊರೆ ಹೋಗಿತ್ತು. 

Similar News