ರಾಷ್ಟ್ರ ಲಾಂಛನ ಇರಬೇಕಿದ್ದ ಕಡೆ ಧರ್ಮ ಲಾಂಛನ ಇರಿಸಿದ ಪ್ರಧಾನಿ ಮೋದಿ ಕ್ರಮ ಸರಿಯಲ್ಲ: ಎಚ್. ವಿಶ್ವನಾಥ್

''ಸಂಸತ್ ಭವನದ ಉದ್ಘಾಟನೆ ನರೇಂದ್ರ ಮೋದಿ ಪಟ್ಟಾಭಿಷೇಕದಂತಿತ್ತು''

Update: 2023-06-02 16:10 GMT

ಮೈಸೂರು,ಜೂ.2: ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭಗಳಲ್ಲಿ ನಡೆದ ಅಂದಿನ ಘಟನೆಗಳಿಂದ ಸಂವಿಧಾನದ ಅಣಕವಾಗಿವೆ. ಈ ಕಾರ್ಯಕ್ರಮ ಮೋದಿಯವರ ಪಟ್ಟಾಭಿಷೇಕದಂತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಎಚ್. ವಿಶ್ವನಾಥ್ , ನೂತನ ಸಂಸತ್ ಭವನದ ಉದ್ಘಾಟನೆಯು ಪ್ರಧಾನಿಯವರ ಸಮ್ಮುಖದಲ್ಲಿ ಸಂವಿಧಾನದ ಅಣಕವಾಗಿದೆ. ಸಂವಿಧಾನವನ್ನು ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ  ಹೆಸರನ್ನು ಅಂದು ಪ್ರಸ್ತಾಪಿಸಲಿಲ್ಲ. ದೇಶದ ಪ್ರಥಮ ಪ್ರಜೆ ಹಾಗೂ ಸೇನೆಯ ಮೂರು ವಿಭಾಗಗಳ ತುಕಡಿಗಳಿಗೆ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯನ್ನು ಆಹ್ವಾನಿಸದೇ ಕಡೆಗಣಿಸಲಾಗಿದೆ. ಒಂದರ್ಥದಲ್ಲಿ ಮೋದಿಯವರ ಪಟ್ಟಾಭಿಷೇಕದಂತೆ ಕಾರ್ಯಕ್ರಮ ನಡೆದಿದೆ. ಎಲ್ಲವೂ ನಾನೇ ಎಂದು ಬಿಂಬಿಸಿಕೊಳ್ಳಲು ಮೋದಿ ಈ ರೀತಿ ಮಾಡಿದ್ದಾರೆ. ಈ ಮೂಲಕ ದೇಶದ 140ಕೋಟಿಗೂ ಹೆಚ್ಚು ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿ ರಾಷ್ಟ್ರ ಲಾಂಛನ ಇರಬೇಕಿತ್ತೋ ಅಲ್ಲಿ ಧರ್ಮ ಲಾಂಛನ ಇರಿಸಿದ ಪ್ರಧಾನಿ ಮೋದಿಯ ಕ್ರಮ ಸರಿಯಲ್ಲ. ಎಲ್ಲಾ ಧರ್ಮೀಯರನ್ನು ಒಳಗೊಂಡ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ. ನೂತನ ಸಂಸತ್ ಭವನದಲ್ಲಿ ಹೋಮ ಹವನ ನಡೆಸುವ ಮೂಲಕ ಮತ್ತೆ ಪುರೋಹಿತಶಾಹಿ ವ್ಯವಸ್ಥೆಯತ್ತ ಕೊಂಡೊಯ್ಯಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದೆ. ಪ್ರಧಾನಮಂತ್ರಿ ಅವರಿಂದಲೇ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದು ಕಿಡಿಕಾರಿದರು.

ಅರಸರ ಕಾಲದಲ್ಲಿ ರಾಜ ದಂಡವನ್ನು ಜನರನ್ನು ಹೆದರಿಸಿ ಆಡಳಿತ ನಡೆಸಲು ಬಳಸಲಾಗುತ್ತಿತ್ತು. ಆದರೆ ಈಗ ರಾಜದಂಡವನ್ನು ಸಂಸತ್ ನಲ್ಲಿ ಪ್ರತಿಷ್ಠಾಪಿಸುವ ಅಗತ್ಯವಿರಲಿಲ್ಲ. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದು ಎಚ್ ವಿಶ್ವನಾಥ್  ಅಸಮಾಧಾನ ವ್ಯಕ್ತಪಡಿಸಿದರು .

Similar News