ಒಡಿಶಾ ರೈಲು ದುರಂತ: ಚಿಕ್ಕಮಗಳೂರಿನಿಂದ ತೆರಳಿದ್ದ 110 ಮಂದಿ ಸುರಕ್ಷಿತ

Update: 2023-06-03 05:40 GMT

ಚಿಕ್ಕಮಗಳೂರು, ಜೂ.3: ಒಡಿಶಾ ರಾಜ್ಯದ ಬಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಕಳೆದ ರಾತ್ರಿ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೇರಿದೆ. ಈ ನಡುವೆ ಅಪಘಾತಕ್ಕೀಡಾದ ರೈಲುಗಳಲ್ಲಿ ಒಂದಾಗಿರುವ ಕೋರಮಂಡಲ ಎಕ್ಸ್ ಪ್ರೆಸ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ 110 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳಸ ತಾಲೂಕು ವ್ಯಾಪ್ತಿಯ ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಎರಡು ದಿನಗಳ ಹಿಂದೆ ಜಾರ್ಖಂಡ್ ನ ಸುಮೇದ್ ಸಿಖರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಈ ರೈಲು ಕಳೆದ ರಾತ್ರಿ ಬಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಆದರೆ ಕಳಸ ತಾಲೂಕಿನಿಂದ ತೆರಳಿದ್ದ 110 ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಸಂಭವಿಸಿದ ಈ ರೈಲು ದುರಂತದಲ್ಲಿ 233 ಪ್ರಯಾಣಿಕರು ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಾಲಿಮರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ 10ರಿಂದ 12 ಬೋಗಿಗಳು ಹಳಿತಪ್ಪಿ, ಎದುರಿನ ಹಳಿಗೆ ಬಿದ್ದು ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಮುಂದುವರಿದಿದೆ.

Similar News