ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಶುದ್ಧ ಮೋಸ ಮಾಡಿದೆ: ಪ್ರಹ್ಲಾದ್ ಜೋಷಿ

Update: 2023-06-03 10:16 GMT

ಹುಬ್ಬಳ್ಳಿ: ಕಾಂಗ್ರೆಸ್ ಆಶ್ವಾಸನೆಗಳು ಬೋಗಸ್, ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ಶುದ್ಧ ಮೋಸ ಮಾಡಿದ್ದಾರೆ. ಘೋಷಿಸಿರುವ ಯೋಜನೆಗಳು ಜನರಿಗೆ ಸಿಗದಂತೆ ಹಲವು ಕಂಡೀಷನ್ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರೇ ಇಷ್ಟು ದಿನ ನಿರುದ್ಯೋಗಿಗಳಾಗಿದ್ದರು. ಈಗ ಭಜರಂಗದಳ, ಬಿಜೆಪಿ ಹೆಸರು ಹೇಳಿ ಅಸಭ್ಯವಾಗಿ ಮಾತಾಡ್ತಿದ್ದಾರೆ. ಬೊಮ್ಮಾಯಿ, ಶೋಭಾ, ಕಟೀಲ್ ಬಗ್ಗೆ ಕಾಂಗ್ರೆಸ್ ಅಹಂಕಾರದಿಂದ ವರ್ತಿಸುತ್ತಿದೆ.ಅನೇಕ ರಾಜ್ಯಗಳಲ್ಲಿ ನಿಮ್ಮ ಅಸ್ತಿತ್ವವೇ ಇಲ್ಲ, ನಿಮ್ಮ ಯೋಗ್ಯತೆ ಏನಿದೆ ತಿಳ್ಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದ್ದೇವೆ ಅಂತ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ರಾಜಕೀಯ ಸೌಜನ್ಯತೆ, ಸಂಸ್ಕೃತಿಯಿದ್ರೆ ಇತರ ರಾಜ್ಯಗಳಲ್ಲಿ ನಿಮ್ಮ ಪರಿಸ್ಥಿತಿ ಏನಿದೆ ನೋಡಿ. ರಾಜ್ಯದ ಜನರೇ ಇವರಿಗೆ ತಕ್ಕ ಉತ್ತರ ಕೊಡ್ತಾರೆ.ಫ್ರಿ ಯೋಜನೆಗಳಿಗೆ ಪ್ರತಿವರ್ಷ 85ಸಾವಿರ ಕೋಟಿ ಖರ್ಚಾಗುತ್ತೆ. ಎಲ್ಲಿಂದ ಹಣ ತರ್ತಾರೆ? ಸಿಎಂ ಉತ್ತರಿಸಲಿ. ಸಾಲ ಮಾಡ್ತಾರಾ, ಅಭಿವೃದ್ಧಿ ಕೆಲಸ ನಿಲ್ಲಿಸ್ತಾರಾ? ತಿಳಿಸಲಿ ಎಂದು ಹೇಳಿದರು.

ರಾಜ್ಯ ಸರ್ಕಾರ ಹೇಳಿದ್ದೊಂದು ಮಾಡಿದ್ದೊಂದು. 200 ಯೂನಿಟ್ ಯಾಕೆ ಮಾಡಿಲ್ಲಾ? ನನಗೆ ಉತ್ತರ ಕೊಡಿ. ಭಾಷಣದಲ್ಲಿ ಭದ್ರಾ ನಿನಗೂ 200 ಯೂನಿಟ್, ಶಿವಾ ನಿನಗೂ ಇನ್ನೂರು ಯುನಿಟ್ ಅಂದಿದ್ರು. ಕಡಿಮೆ ವಿದ್ಯುತ್ ಬಳಸುವವರಿಗೆ ಏನು ಉಪಯೋಗ ಇಲ್ಲದಂತೆ ಮಾಡಿದ್ದಾರೆ. 200 ಯೂನಿಟ್ ಗಿಂತ ಹೆಚ್ಚು ಬಳಸುವವರ ಬಗ್ಗೆಯೂ ಸ್ಪಷ್ಟನೆ ಇಲ್ಲ. ಜನಕ್ಕೆ ಕಾಂಗ್ರೆಸ್ ಪಾರ್ಟಿ ಅವರು ಮೋಸ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿದೆ ಎಂದರು.

10 ಕೆಜಿ ಅಕ್ಕಿ ಅಂತ ಭಾಷಣ ಮಾಡಿದವರು ನೀವು. 5 ಕೆಜಿ ಅಕ್ಕಿಯನ್ನು ಭಾರತ ಸರ್ಕಾರ ಈಗಾಗಲೇ ಕೊಡುತ್ತಿದೆ, ಅದರ ಬಗ್ಗೆ ಏನು ಹೇಳ್ತೀರಿ? ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಉಡಾಫೆ ಉತ್ತರ ನಡೆಯಲ್ಲ. ಭಾರತ ಸರ್ಕಾರದ 5 ಕೆಜಿ ಜೊತೆಗೆ ಪ್ರತ್ಯೇಕ 10 ಕೆಜಿ ಕೊಡ್ತೀರಾ,? ಇಲ್ಲ ಕೇವಲ 5 ಕೆಜಿ ಕೊಡ್ತಾರಾ  ಎಂದು ಪ್ರಶ್ನಿಸಿದರು.

ಎಲ್ಲಾ ಪದವೀಧರ ಯುವಕರಿಗೆ 3000 ಅಂತ ಯುವನಿಧಿ ಬಗ್ಗೆ ಹೇಳಿದ್ದರು. ಈಗ 2023ರಲ್ಲಿ ಪಾಸಾದ ಪದವೀಧರರು, ಡಿಪ್ಲೋಮಾ ಹೋಲ್ಡರ್‌ಗಳಿಗೆ ಮಾತ್ರ ಅನ್ನುತ್ತಿದ್ದಾರೆ. 2023ರ‌ ಮೊದಲು ನಿರುದ್ಯೋಗಿಗಳಿಲ್ವಾ, ಇದನ್ನ ಮೊದಲೇ ಹೇಳಬೇಕಿತ್ತಲ್ವಾ. ಶುದ್ಧವಾದ ಮೋಸವನ್ನು ಕಾಂಗ್ರೆಸ್ ಪಾರ್ಟಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೊದಲ ಕ್ಯಾಬಿನೇಟ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ ಅಂತಾ ಮೊದಲು ನಾಟಕ ಮಾಡಿದ್ರು. ಈಗ ಅಪ್ಲಿಕೇಶನ್ ಹಾಕಲು ಹೇಳಿ ತಡ ಮಾಡುತ್ತಿದ್ದಾರೆ, ಬೇಕಂತಲೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೆಚ್ಚು ಅಪ್ಲಿಕೇಷನ್ ಹಾಕದಂತೆ ಕಂಡೀಷನ್ ಹಾಕಿದ್ದಾರೆ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದು ಸಿದ್ದರಾಮಯ್ಯ, ಡಿಕೆಶಿ ಸ್ಟ್ರಾಟಜಿ ಎಂದು ಹೇಳಿದರು.

Similar News