ಚಿಕ್ಕಮಗಳೂರು | ತರೀಕೆರೆ ಶಾಸಕರ ಅಭಿನಂದನೆ ಕಾರ್ಯಕ್ರಮದಲ್ಲಿ ಗಲಾಟೆ, ಯುವಕನ ಹತ್ಯೆ

Update: 2023-06-04 04:08 GMT

ಚಿಕ್ಕಮಗಳೂರು, ಜೂ.4: ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದ ವೇಳೆ ಉಂಟಾದ ಗಲಾಟೆಯಲ್ಲಿ ಓರ್ವ ಯುವಕನ ಬರ್ಬರ ಹತ್ಯೆಯಾಗಿರುವ ಘಟನೆ ತರೀಕೆರೆ ಪಟ್ಟಣದಲ್ಲಿ ಶನಿವಾರ ರಾತ್ರಿ 11:30ರ ಸುಮಾರಿಗೆ ನಡೆದಿದೆ.

ಮೃತರನ್ನು ವರುಣ್​ (28) ಎಂದು ಗುರುತಿಸಲಾಗಿದೆ. ಕಬಾಬ್​ ಮೂರ್ತಿ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ತರೀಕೆರೆ ಕಾಂಗ್ರೆಸ್ ಶಾಸಕ ಜಿ.ಎಚ್​.ಶ್ರೀನಿವಾಸ್​ ರಿಗೆ ಅವರ ಅಭಿಮಾನಿಗಳು ಶನಿವಾರ ತರೀಕೆರೆಯಲ್ಲಿ ಅಭಿನಂದನೆ ಸಮಾರಂಭವನ್ನು ಏರ್ಪಡಿಸಿದ್ದರು. ಶಾಸಕರಿಗೆ ಅಭಿನಂದನೆ ಮುಗಿದ ಬಳಿಕ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಾಡು ಬದಲಿಸುವ ವಿಚಾರದಲ್ಲಿ ವರುಣ್ ಮತ್ತು ಕಬಾಬ್ ಮೂರ್ತಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಕ್ಷುಲ್ಲಕ ವಿಚಾರದಲ್ಲಿ ಇವರಿಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ. ಆ ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ವರುಣ್​ನ ಹೊಟ್ಟೆ ಹಾಗೂ ಪಕ್ಕೆಲುಬಿಗೆ ಆರೋಪಿ ಕಬಾಬ್ ಮೂರ್ತಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವರುಣ್ ರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇದೇವೇಳೆ ಮಂಜು ಹಾಗೂ ಸಂಜು ಎಂಬವರಿಗೂ ಚೂರಿ ಇರಿತದಿಂದ ಗಾಯಗಳಾಗಿವೆ.

ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Similar News