ಚಿಕ್ಕಮಗಳೂರು: ಅಂಧ ಶಿಕ್ಷಕನ ಹತ್ಯೆ

Update: 2023-06-04 14:35 GMT

ಚಿಕ್ಕಮಗಳೂರು, ಜೂ.4: ಜಿಲ್ಲೆಯ ಅಜ್ಜಂಪುರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಧ ಶಿಕ್ಷಕ ಹಾಗೂ ಮಲೆಬೆನ್ನೂರು ಮೂಲದವರಾದ ಮಾಲತೇಶ ಜೋಶಿ(54) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಪಟ್ಟಣದ ಶೆಟ್ಟು ಸಿದ್ಧಪ್ಪ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ರವಿವಾರ ಪ್ರಕರಣ ಬೆಳಕಿಗೆ ಬಂದಿದೆ. ಅಂಧರಾಗಿದ್ದ ಶಿಕ್ಷಕ ಮಾಲತೇಶ್ ಜೋಶಿ 13 ವರ್ಷಗಳಿಂದ ಸಂಗೀತ ಶಿಕ್ಷಕರಾಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಡಿವೈಎಸ್ಪಿ ನಾಗರಾಜ್, ಪಿಐ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ಶಿಕ್ಷಕನಿಗೆ ಪತ್ನಿ, ಮಗನಿದ್ದು, ಶಿವಮೊಗ್ಗದಲ್ಲಿ ವಾಸವಿದ್ದಾರೆ. ಶಿಕ್ಷಕನ ಹತ್ಯೆಗೆ ಕಾರಣ ಏನೆಂದು ತನಿಖೆಯಿಂದ ತಿಳಿದು ಬರಬೇಕಿದೆ.

Similar News