ಓ ಮೆಣಸೇ...

Update: 2023-06-04 18:33 GMT

ನನ್ನ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೂ ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ - ಬಿ.ಕೆ.ಹರಿಪ್ರಸಾದ್, ವಿ.ಪ. ಸದಸ್ಯ
ಸದ್ಯ ಜನರು, ಬೇರಾವುದೇ ಸಿದ್ಧಾಂತದ ಬದಲು ಅಹಿಂದದ ಪ್ರತಿಪಾದಕರಿಗೆ ತಮ್ಮ ಬೆಂಬಲ ಘೋಷಿಸಿದ್ದು, ಅದನ್ನು ಗೌರವಿಸುವುದೇ ಜಾಣ ನಿಲುವು.

ಗೂಂಡಾಗಿರಿ, ಮಾಫಿಯಾ, ದ್ವೇಷ ರಾಜಕಾರಣದ ವಿರುದ್ಧ ನಮ್ಮ ಶಾಸಕರೆಲ್ಲ ಒಗ್ಗಟಾಗಿ ಹೋರಾಟ ನಡೆಸುವರು - ನಳಿನ್ ಕುಮಾರ್ ಕಟೀಲು, ಸಂಸದ
ಬಿಜೆಪಿಯ ಶಾಸಕರೆಲ್ಲ ಬಿಜೆಪಿಯ ವಿರುದ್ಧವೇ ಹೋರಾಟಕ್ಕಿಳಿಯುವ ಆ ದೃಶ್ಯ ಖಂಡಿತ ರಮಣೀಯವಾಗಿದ್ದೀತು.

ಶಾಂತಿ ಕದಡುವ ಪ್ರಯತ್ನ ಮಾಡಿ ನೋಡಿ, ಸಂವಿಧಾನದ ಪವರ್ ಏನೆಂದು ತೋರಿಸುತ್ತೇನೆ - ಪ್ರಿಯಾಂಕ್ ಖರ್ಗೆ, ಸಚಿವ
ನಿಮ್ಮ ಬೆದರಿಕೆಯು ಪ್ರಚೋದನೆಯ ಧಾಟಿಯಲ್ಲಿದೆಯಲ್ಲಾ!

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಆಶ್ವಾಸನೆಗಳು ಬಿಜೆಪಿ ಸೋಲಿಗೆ ಕಾರಣ - ಶ್ರೀರಾಮುಲು, ಮಾಜಿ ಸಚಿವ
ಬಿಜೆಪಿಯವರು ನೀಡಿದ್ದ ಗ್ಯಾರಂಟಿಗಳನ್ನು ಜನರು ನಂಬದಿರುವುದು ಬಿಜೆಪಿ ಸೋಲಿಗೆ ಕಾರಣವಾಯಿತು.

ನಾನು ಕಾಂಗ್ರೆಸ್ ಶಾಸಕನಾಗಿದ್ದರೂ ಸಂಘದ ಶಿಸ್ತಿನ ಸ್ವಯಂ ಸೇವಕ -ಎಚ್.ಡಿ.ತಮ್ಮಯ್ಯ, ಶಾಸಕ
ಈ ನಿಮ್ಮ ಅಸಂಬದ್ಧ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ಸಹಿಸಿಕೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ಆರೆಸ್ಸೆಸ್ ಪರಿವಾರದ್ದೇ ಕೂಸು ಎಂಬ ಆರೋಪ ನಿಜವೆನಿಸುತ್ತದೆ.

ನಾನು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ಅಂಗವಿಕಲನಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
ವಿನಾಶದ ಹಾದಿಯಲ್ಲಿ ಬಹುದೂರ ಸಾಗಿರುವವರ ಆರೋಗ್ಯ ಹೇಗಿದ್ದರೇನು?

ಅಭಿವೃದ್ಧಿ ಹೊಂದಿದ ಭಾರತ ಎಂಬ ಪರಿಕಲ್ಪನೆಯ ಸಾಕಾರಕ್ಕೆ ಹೊಸ ಸಂಸತ್ ಭವನ ಸಾಕ್ಷಿಯಾಗಲಿದೆ - ನರೇಂದ್ರ ಮೋದಿ, ಪ್ರಧಾನಿ
ಕಟ್ಟಡಗಳನ್ನೇ ಅಭಿವೃದ್ಧಿಯ ಮಾನದಂಡಗಳೆಂದು ಪರಿಗಣಿಸುವುದಾದರೆ, ಮೊಗಲರ ಕಾಲದ ಅಭಿವೃದ್ಧಿಯ ಬಗ್ಗೆ ಏನಂತೀರಿ?

ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ -ದೇವೇಗೌಡ, ಮಾಜಿ ಪ್ರಧಾನಿ
ಚುನಾವಣಾ ಫಲಿತಾಂಶಗಳು ತಂದೊಡ್ಡುವ ಭಾರೀ ಸಂಕಟಗಳನ್ನು ಮರೆಯಲು ಇಂತಹ ಆಲೋಚನೆಗಳು ಒಂದಷ್ಟು ನೆರವಾಗಬಹುದು.

ಲಕ್ಷ್ಮಣ ಸವದಿ ಮತ್ತು ನನಗೆ ಸಚಿವ ಸ್ಥಾನ ಸಿಗಬೇಕೆಂಬುದು ಜನರ ಇಚ್ಛೆಯಾಗಿತ್ತು -ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಪಾಪ, ಜನರು ಅಂದರೆ ಹಾಗೆ. ಅವರಿಗೆ, ನಿಮ್ಮನ್ನು ಸಚಿವರಾಗಿಸಬೇಕು ಎಂಬ ಒಂದು ಆಶೆ ಬಿಟ್ಟರೆ ಬೇರಾವ ಆಶೆಯೂ ಇರುವುದಿಲ್ಲ.

ರಾಜ್ಯದಲ್ಲಿರುವ ನಾಯಕರು, ಆತ್ಮೀಯರೇ ನನ್ನನ್ನು ತುಳಿಯಲು ನೋಡಿದರು - ಗಾಲಿ ಜನಾರ್ದನ ರೆಡ್ಡಿ, ಶಾಸಕ
ತುಳಿದವರನ್ನು ತುಳಿಯಬೇಕು ಎಂದು ಜನರು ಈಗಲೂ ನಂಬಿದ್ದಾರೆ. ಸೆಕ್ಯೂರಿಟಿ ಇಲ್ಲದೆ ತಿರುಗಾಡಬೇಡಿ.

ಕಳೆದ ಒಂಭತ್ತು ವರ್ಷಗಳಿಂದಲೂ ಮೋದಿ ಸರಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಆದ್ದರಿಂದ, ಲೂಟಿ ನಿಲ್ಲಬೇಕು ಅಂತೀರಾ ಅಥವಾ ಲೂಟಿಯ ಸರದಿ ಬದಲಾಗಬೇಕು ಅಂತಿದ್ದೀರಾ?

ಆರೆಸ್ಸೆಸ್‌ನಲ್ಲಿರುವ ಶೂದ್ರರನ್ನು ತಿದ್ದುವ ಕೆಲಸ ಆಗಬೇಕಿದೆ - ಸತೀಶ್ ಜಾರಕಿ ಹೊಳಿ, ಸಚಿವ
ಇತರರು ಸುಧಾರಣೆ ಸಾಧ್ಯವೇ ಇಲ್ಲದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದಾರೆಯೇ?

ಮಾನವ ಮತ್ತು ವನ್ಯ ಮೃಗಗಳ ಸಂಘರ್ಷ ತಪ್ಪಿಸಲು ಸರಕಾರ ಎಲ್ಲ ಕ್ರಮಕೈಗೊಳ್ಳಲಿದೆ -ಈಶ್ವರ ಖಂಡ್ರೆ, ಸಚಿವ
ಮಾನವರು ಅಕ್ರಮವಾಗಿ ವಶಪಡಿಸಿಕೊಂಡಿರುವ, ವನ್ಯಮೃಗಗಳಿಗೆ ಸೇರಿದ ನೆಲ ಮತ್ತಿತರ ಸಂಪನ್ಮೂಲಗಳನ್ನು ಬಿಡುಗಡೆಗೊಳಿಸಿಬಿಟ್ಟರೆ ಸಾಕು ಯಾವ ಸಂಘರ್ಷಕ್ಕೂ ಎಡೆಯೇ ಇಲ್ಲ.

ಪ್ರಧಾನಿ ಮೋದಿಯವರು ತಾವು ಗುಜರಾತಿನ ಸಿಎಂ ಆಗಿ ಪಡೆದಿದ್ದ ಅನುಭವದಿಂದ ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷೆಗೆ ಒತ್ತು ಕೊಡಲಿದ್ದಾರೆ - ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಸದ್ಯದ ಸ್ಥಿತಿ ನೋಡಿದರೆ, ಮುನಿಸಿಪಾಲಿಟಿ ಸದಸ್ಯನಾದ ಅನುಭವ ಕೂಡಾ ಇದ್ದಂತೆ ಕಾಣಿಸುತ್ತಿಲ್ಲ.

ನಾನು ಎಂದೂ ಬಿಸಿಲು ಕುದುರೆ ಹಿಂದೆ ಓಡುವವನಲ್ಲ -ಲಕ್ಷ್ಮಣ ಸವದಿ, ಶಾಸಕ
ಯಾವುದೇ ಕುದುರೆಯ ವೇಗದ ಬಗ್ಗೆ ತಿಳಿದಿರುವ ಕತ್ತೆ ಸ್ಪರ್ಧೆಗೆ ಇಳಿಯುವುದಿಲ್ಲ.

ಕೆಲವು ಕಾಂಗ್ರೆಸ್ ಬೆಂಬಲಿತ ಬುದ್ಧಿ ಜೀವಿಗಳ ವಿಚಾರ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾಗಿದೆ -ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ
ಬಿಜೆಪಿಯ ವಿಚಾರ ಮಾತ್ರ ಸಾಧ್ಯಂತ ಈ ದೇಶ, ಇಲ್ಲಿನ ಜನತೆ ಮತ್ತು ಮಾನವೀಯತೆಯ ಪಾಲಿಗೆ ಅಪಥ್ಯವಾಗಿದೆ.

ಮೋದಿ ಸರಕಾರದಿಂದ ಕಳೆದ 9 ವರ್ಷಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕ್ರಾಂತಿಕಾರಿ ಬದಲಾವಣೆಗಳು ಆಗಿವೆ - ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ
ಈ ರೀತಿ ಮಾಜಿ ರಾಷ್ಟ್ರಪತಿಗಳು ಕೂಡಾ ಸರಕಾರವನ್ನು ಹೊಗಳುವುದಕ್ಕೆ ನಿರ್ಬಂಧಿತರಾಗುವುದು ನಿಜಕ್ಕೂ ದೊಡ್ಡ ಕ್ರಾಂತಿ.

ಜೆಡಿಎಸ್ ಒಂದು ಜೋಕರ್ ಪಕ್ಷ ಅದನ್ನು ಮುಂದೆ ಯಾರೂ ನಂಬುವುದಿಲ್ಲ - ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಸರಕಾರ ರಚನೆ ಸರ್ಕಸ್ ಆದಾಗ ಜೋಕರ್‌ಗಳಿಗೂ ಮಾನ್ಯತೆ ಬರುತ್ತದೆ.

ಟ್ವಿಟರ್‌ನಲ್ಲಿ ಮೋದಿ ಫಾಲೋವರ್‌ಗಳು ಪೆದ್ದರು - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಅವರು ಜಾತಿವಾದಿಗಳಾಗಿದ್ದರೆ ನಿಮ್ಮ ಫಾಲೋವರ್ ಗಳಾಗಿರುತ್ತಿದ್ದರು.

ದೇಶದ ಮುಸ್ಲಿಮರು ಕಾಂಗ್ರೆಸ್ ಪಾಲಿಗೆ ಚುಯಿಂಗಮ್ ಇದ್ದಂತೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೆಂದ್ರದ ಮಾಜಿ ಸಚಿವ
ನೀವು ಆರೆಸ್ಸೆಸ್ ಬಾಯಿಯ ತಾಂಬೂಲ ಇದ್ದಂತೆ ಎನ್ನುವ ಆರೋಪಗಳಿವೆ.

ಕಷ್ಟದ ಕಾಲದಲ್ಲಿ ಕೈಹಿಡಿದ ನಾಯಕರನ್ನು ಕಾಂಗ್ರೆಸ್ ಯಾವತ್ತೂ ಕೈಬಿಡುವುದಿಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕೈ ಹಿಡಿದ ನಾಯಕರು ಕೊನೆಯ ಗಳಿಗೆಯಲ್ಲಿ ಕಾಂಗ್ರೆಸನ್ನು ಕೈ ಬಿಡದಂತೆಯೂ ನೋಡಿಕೊಳ್ಳಬೇಕಾಗಿದೆ.

ಕುಸ್ತಿ ಪಟುಗಳು ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಹಾಕುವುದರಿಂದ ನನ್ನನ್ನು ಯಾರೂ ಗಲ್ಲಿಗೇರಿಸುವುದಿಲ್ಲ - ಬ್ರಿಜ್ ಭೂಷಣ್ ಶರಣ್ ಸಿಂಗ್, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ
ಯಾರೂ ಗಲ್ಲಿಗೇರಿಸುವುದಿಲ್ಲ ಎನ್ನುವ ಧೈರ್ಯದಿಂದಲೇ ಮಹಿಳಾ ಕುಸ್ತಿ ಪಟುಗಳ ಮೇಲೆ ದೌರ್ಜನ್ಯ ಎಸಗಿರಬೇಕು.

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...