ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರಕಾರ: ಕೇಂದ್ರದ ವಿರುದ್ಧ ನಟ ಕಿಶೋರ್ ಕಿಡಿ

''ಅಪರಾಧಿ ಸರಕಾರವೇ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ...''

Update: 2023-06-06 07:45 GMT

ಬೆಂಗಳೂರು: ಒಡಿಶಾದ ಬಾಲಸೋರ್‌ನಲ್ಲಿ 278 ಮಂದಿಯನ್ನು ಬಲಿ ಪಡೆದಿರುವ ಭೀಕರ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿದ್ದು, ಕೇಂದ್ರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಅಲ್ಲದೇ,  ಇನ್ನೂರಕ್ಕೂ ಹೆಚ್ಚು ಜನರ ಸಾವಿಗೆ ನೇರವಾಗಿ ಕೇಂದ್ರ ಸರಕಾರವೇ ಹೊಣೆ ಎಂದು ವಿಪಕ್ಷಗಳು ಆರೋಪಿಸಿವೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. 

''ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ… ಎಂಥ ವಿಪರ್ಯಾಸ'' ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಕಿಶೋರ್ ಕುಮಾರ್ ಅವರ ಪೊಸ್ಟ್ ನಲ್ಲೇನಿದೆ?

''ಯಾರ ಮೇಲೆ ಕಠಿಣ ಕ್ರಮ ? ಯಾರು ಕಾರಣ ?, ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ?, ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ಸರ್ಕಾರ ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ ?'' ಎಂದು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿಬೀದರ್‌ | ಊರಿಗೆ ಬಸ್‌ ಇಲ್ಲವೆಂದು ಸರ್ಕಾರಿ ಬಸ್ಸನ್ನೇ ಚಲಾಯಿಸಿಕೊಂಡು ಹೋದ ವ್ಯಕ್ತಿ: ಮುಂದೇನಾಯ್ತು?

'ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು,
‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ ?  ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ರೈಲು ಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ??? ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ… ಎಂಥ ವಿಪರ್ಯಾಸ!!!' ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

''ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ.. ನಮ್ಮ ಸರ್ಕಾರ… ಮೂರ್ಖ ಸರ್ಕಾರದ,  ನಾಲಾಯಕ್ಕು ಮಂತ್ರಿಗಳ, ಪ್ರಜೆಗಳೆಲ್ಲ ಬರೀ ಮತಗಳಂತೆ ಕಾಣುವ ಪ್ರಚಾರಿ ಪ್ರಧಾನಿಯ  ಸಂಕುಚಿತ ದೃಷ್ಟಿಯನ್ನು ಮುಚ್ಚಿ ಹಾಕಲು ಹೋಗಿ, ಆಡಳಿತ ಪಕ್ಷ ಮತ್ತದರ ಬೂಟು ನೆಕ್ಕುವ ಮಾಧ್ಯಮಗಳು ತಪ್ಪನ್ನೂ ಸರಿಯೆಂದು ಸಾಧಿಸ ಹೊರಟರೆ ಕಳೆದು ಕೊಂಡ ಪ್ರಾಣಗಳಿಗೆ ನೊಂದು ಜರ್ಜರಿತವಾದ ಕುಟುಂಬಗಳ ಕಣ್ಣೀರಿಗೆ ಅರ್ಥವಿಲ್ಲದೇ ಹೋದೀತು….'' ಎಂದು ಕಿಡಿಕಾರಿದ್ದಾರೆ. 

''ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ  ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಚುನಾವಣೆಯಾಚೆಗಿನ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ…'' ಎಂದಿ ನಟ ಕಿಶೋರ್ ಆಗ್ರಹಿಸಿದ್ದಾರೆ. 

Full View

Similar News