ಮರಕ್ಕೆ ಕಾರು ಢಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯು

Update: 2023-06-06 11:17 GMT

ಶಿವಮೊಗ್ಗ, ಜೂ.6: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇನ್ನಿಬ್ಬರು ಗಾಯಗೊಂಡ ಘಟನೆ ಹೊಳಲೂರು ರಸ್ತೆಯ ಹೊಳೆಹಟ್ಟಿ ಬಳಿ ಮಂಗಳವಾರ ಸಂಭವಿಸಿದೆ.

ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಶರತ್ (42) ಮೃತ ವ್ಯಕ್ತಿ. ಶರತ್ ಅವರ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಲಸದ ನಿಮಿತ್ತ ಶರತ್ ಅವರು ಕುಟುಂಬ ಸಹಿತ ಶಿವಮೊಗ್ಗಕ್ಕೆ ಬಂದು ಮನೆಗೆ ಮರಳುತ್ತಿದ್ದರು. ಶರತ್ ಚಲಾಯಿಸುತ್ತಿದ್ದ ಕಾರು ಹೊಳೆಹಟ್ಟಿ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ  ಹೊಡದಿದೆ. ಸ್ಥಳದಲ್ಲೇ ಶರತ್ ಮೃತಪಟ್ಟಿದ್ದಾರೆ. ಕಾರಿನಲ್ಲಿ ಏರ್ ಬಲೂನ್ ಓಪನ್ ಆಗಿದ್ದರಿಂದ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್ ಸಣ್ಣಪುಟ್ಟ ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Similar News