ಲಕ್ಷ್ಮಣ್ ಸವದಿ ಸೇರಿ ಮೂವರ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ

Update: 2023-06-06 14:19 GMT

ಬೆಂಗಳೂರು, ಜೂ.6: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗವು ಜೂ.30ರಂದು ಉಪ ಚುನಾವಣೆ ಘೋಷಿಸಿದೆ.

ಉಪ ಚುನಾವಣೆಗೆ ಜೂ.13ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಜೂ.20ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜೂ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.23ರವರೆಗೆ ನಾಮಪತ್ರ ಹಿಂಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜೂ.30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ನಂತರ ಮತಗಳ ಎಣಿಕೆ ಕಾರ್ಯ ನಡೆಸಿ, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಪ್ರಸಕ್ತ ಸಾಲಿನ ಮಾ.20ರಂದು ರಾಜೀನಾಮೆ ನೀಡಿದ್ದ ಬಾಬುರಾವ್ ಚಿಂಚನಸೂರ್ ಅವರ ಅಧಿಕಾರ ಅವಧಿಯು 2024ರ ಜೂ.17ರವರೆಗೆ ಇತ್ತು. ಎ.12ರಂದು ರಾಜೀನಾಮೆ ನೀಡಿದ್ದ ಆರ್.ಶಂಕರ್ ಅವರ ಅಧಿಕಾರ ಅವಧಿಯು 2026ರ ಜೂ.30ರವರೆಗೆ ಇತ್ತು. ಎ.14ರಂದು ರಾಜೀನಾಮೆ ನೀಡಿದ್ದ ಲಕ್ಷ್ಮಣ ಸವದಿ ಅವರ ಅಧಿಕಾರ ಅವಧಿಯು 2028ರ ಜೂ.14ರವರೆಗೆ ಇತ್ತು. ಇದೀಗ ಈ ಮೂವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

Similar News