ಸಾಮಾನ್ಯ ಜನರ ಅರಸರಾಗಿದ್ದ ದೇವರಾಜ ಅರಸು: ಎಚ್.ವಿಶ್ವನಾಥ್ ಬಣ್ಣನೆ

Update: 2023-06-06 15:54 GMT

ಮೈಸೂರು,ಜೂ.6: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಮಂಗಳವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು  ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಅರಸುರ  ಅವರನ್ನು  ಸ್ಮರಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಹಿಂದುಳಿದ ಹಾಗೂ ಶೋಷಿತರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಅವರನ್ನು ಸಾಮಾಜಿಕವಾಗಿ ಮುನ್ನೆಲೆಗೆ ತಂದ ದೇವರಾಜ ಅರಸು ಅವರು ನಿಜವಾಗಿಯೂ ಸಾಮಾನ್ಯ ಜನರ ಅರಸರಾಗಿದ್ದರು. ಯಾವುದೇ ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲವಾಗಬೇಕಾದರೆ ರಾಜಕೀಯ ಅಧಿಕಾರ ಬಹಳ ಮುಖ್ಯ. ಇದನ್ನು ಮನಗಂಡಿದ್ದ ದೇವರಾಜ ಅರಸು ಅವರು ಸಣ್ಣಪುಟ್ಟ ಜನಾಂಗದವರಿಗೂ ರಾಜಕೀಯ ಅಧಿಕಾರ ನೀಡಿದರು ಎಂದು ಸ್ಮರಿಸಿದರು.

ಉಳುವವನಿಗೇ ಭೂಮಿ ಎಂಬ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಸುಮಾರು 21 ಲಕ್ಷ ಹೆಕ್ಟೇರ್ ಪ್ರದೇಶವನ್ನು ಬಡವರಿಗೆ ನೀಡಿದ್ದು ಐತಿಹಾಸಿಕ ಚರಿತ್ರೆ. ಕಾಂಗ್ರೆಸ್ ಪಕ್ಷದ ಇಂತಹ ಚಾರಿತ್ರಿಕ ತೀರ್ಮಾನವನ್ನು ಜನರ ಬಳಿ ಕೊಂಡೊಯ್ಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ, ಮಾನವೀಯತೆಗೆ ಮತ್ತೊಂದು ಹೆಸರೇ ದೇವರಾಜ ಅರಸು. ಬಡವರಿಗೆ, ದೀನದಲಿತರಿಗೆ ಸಹಾಯ ಮಾಡುವ ಸಂದರ್ಭ ಎದುರಾದಲ್ಲಿ ಹಿಂದೆ ಮುಂದೆ ಯೋಚಿಸದೆ ಸಹಾಯ ಹಸ್ತ ಚಾಚುತ್ತಿದ್ದರು. ಅವರ ಬಳಿ ಸಹಾಯ ಪಡೆದವರಲ್ಲಿ ನಾನೂ ಕೂಡ ಒಬ್ಬ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್,  ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮಾಜಿ ಮೇಯರ್‍ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಎಂ.ಸಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಆರ್.ಸೋಮಸುಂದರ್, ಶಿವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್.ಗೌಡ, ಈಶ್ವರ ಚಕ್ಕಡಿ, ಲತಾ ಸಿದ್ದಶೆಟ್ಟಿ, ಅಬು ಅಹಮದ್, ಪಾರ್ಥಸಾರಥಿ, ಯೋಗೇಶ್ ಉಪ್ಪಾರ್, ಪ್ರಕಾಶ್ ಕುಂಬಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ, ಆರ್.ನಾಗೇಶ್, ಕೆ.ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

''ದೇವರಾಜ ಅರಸರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಯುವಕರಿಗೆ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಾಕ್ಷ್ಯ ಚಿತ್ರ ಸಿದ್ಧಪಡಿಸಿ ಯುವ ಪೀಳಿಗೆಗೆ ಅವರ ಬಗ್ಗೆ ಜಾಗೃತಿ ಮೂಡಿಸಬೇಕು''

ದರ್ಶನ್ ಧ್ರುವನಾರಾಯಣ, ಶಾಸಕ, ನಂಜನಗೂಡು.

Similar News