ಹೆಡಗೇವಾರ್ ತರಹದ ಹೇಡಿಗಳನ್ನ ಪಠ್ಯದಲ್ಲಿರಲು ಬಿಡುವುದಿಲ್ಲ: ಬಿ.ಕೆ ಹರಿಪ್ರಸಾದ್

''ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ''

Update: 2023-06-08 06:03 GMT

ಶಿವಮೊಗ್ಗ: 'ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ.ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ತರಹದ ಹೇಡಿಗಳನ್ನ ನಮ್ಮ ಮಕ್ಕಳ ಪಠ್ಯದಲ್ಲಿರಲು ಬಿಡುವುದಿಲ್ಲ' ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಶಿವಮೊಗ್ಗದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, 'ಸಂಘ ಪರಿವಾರದ ಸಿದ್ಧಾಂತಗಳು ಯಾವುದೇ ಇಲಾಖೆಯಲ್ಲಿ ತೂರಲು ಬಿಡೋದಿಲ್ಲ. ಹೆಡ್ಗೇವಾರ್ ತರಹದ ರಣಹೇಡಿಗಳ ಪಠ್ಯ ಇರೋದಿಲ್ಲ' ಎಂದು ಕಿಡಿಕಾರಿದರು. 

''ಕೇಶವ್ ಬಲಿರಾಮ್ ಹೆಡಗೇವಾರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಸಾಬೀತು ಮಾಡಲಿ, ಬ್ರಿಟೀಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಯಾರೋ ಹೇಳಿಕೆ ನೀಡಿ ನಾಥುರಾಮ್ ಗೋಡ್ಸೆ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂದಿದ್ದಾರೆ. ಇವರ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಗೂ ವ್ಯತ್ಯಾಸವಿದೆ. ಬಿಜೆಪಿ ಅಥವಾ ಸಂಘಪರಿವಾರದವರು ಅವರದ್ದೇ ಆದ  ಗ್ರಂಥಗಳಲ್ಲಿ ಆರು ಬಾರಿ ಕ್ಷಮಾಪಣಾ ಪತ್ರ ಕೊಟ್ಟಿರೋದಾಗಿ ಉಲ್ಲೇಖಿಸಿದ್ದಾರೆ. ಬ್ರಿಟೀಷರಿಗೆ ಯಾಕೆ ಕ್ಷಮಾಪಣಾ ಪತ್ರ ನೀಡಿದರು ಎಂದು ಹೇಳಲಿ. ಇಂಥಹ ರಣಹೇಡಿಗಳನ್ನ ಮಕ್ಕಳು ಓದುವ ಪಠ್ಯ ಪುಸ್ತಕದಲ್ಲಿ ಇಡಲು ಬಿಡೋದಿಲ್ಲ. ಚುನಾವಣೆ ಅಜೆಂಡಾ ಮಾಡಿಕೊಳ್ಳೋದು ಬಹಳ ಸಂತೋಷ, ಈ ಸಲ ಬಿಜೆಪಿಯನ್ನ ಜನ ಅರಬ್ಬಿ ಸಮುದ್ರಕ್ಕೆ ಹಾಕ್ತಾರೆ'' ಎಂದರು. 

'ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅನೈತಿಕ ಸರ್ಕಾರ ಮಾಡಿದ ಮೇಲೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ನಾಲ್ಕು ವರ್ಷ ಇವರ ಆಡಳಿತ ನೋಡಿದ್ದೇನೆ. ಕೃಷಿ, ಕಾರ್ಮಿಕ, ಶಿಕ್ಷಣ ಇಲಾಖೆಯಲ್ಲಿ ಸಂಪೂರ್ಣ ಕೇಸರೀಕರಣ ಮಾಡಲು ಬಿಜೆಪಿ ಹೊರಟಿತ್ತು. ಭಾರತ ಸಾವಿರಾರು ವರ್ಷಗಳಿಂದಲೂ ಜಾತ್ಯಾತೀತ ರಾಷ್ಟ್ರವಾಗಿ ಉಳಿದುಕೊಂಡಿದೆ. ಇದನ್ನ ಬಿಜೆಪಿ ಬುಡಮೇಲು ಮಾಡಲು ಹೊರಟಿತ್ತು. ಎಲ್ಲೆಲ್ಲಿ ಸಂಘಪರಿವಾರದ ತತ್ವ ಸಿದ್ಧಾಂತಗಳನ್ನ ತೂರಲು ಹೊರಟಿದ್ದರೋ ಅದನ್ನ ನಾವು ಎಲ್ಲಾ ಕ್ಷೇತ್ರದಲ್ಲಿ ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತೆ' ಎಂದರು.

'ಕರಾವಳಿ, ಮಲೆನಾಡಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಿದೆ. ಬಜರಂಗದಳ ವಿರುದ್ಧ ನಾವು ಸಮರ ಸಾರಿದ್ದೆವು. ಬಿಜೆಪಿ ಅದನ್ನ ಅಜೆಂಡಾ ಮಾಡಿಕೊಂಡರೂ ಸಹ ಜನ ತಿರಸ್ಕರಿಸಿದರು. ಜನ ಸ್ಪಷ್ಟವಾಗಿ ತೀರ್ಪು ನೀಡಿದ್ದಾರೆ. ಇವನ್ನ ಬಿಟ್ಟು ಜನರಿಗೆ ಒಳಿತಾಗುವ ಕೆಲಸ ಬಿಜೆಪಿ ಮಾಡಲಿ, ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಲೆ ನೀಡಲಿ' ಎಂದರು. 

'ಜಾತಿ ಗಣತಿ ನಾವು ಬಹಿರಂಗ ಮಾಡ್ತೀವಿ, ನಮ್ಮ ನಾಯಕರು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿನ ಗಣತಿ ಎಂದು ಹೇಳಲಾಗದು, ಬದಲಾವಣೆ ಇದ್ದರೆ ಮಾಡ್ತೀವಿ' ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು. 

Similar News