ಸಾಗರ: ಹಾಸ್ಟೆಲ್ ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು

ತನಿಖೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

Update: 2023-06-08 09:26 GMT

ಸಾಗರ : ಇಲ್ಲಿನ ಖಾಸಗಿ ವಸತಿ ವಿದ್ಯಾಲಯವೊಂದರಲ್ಲಿ 13 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ. ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಲು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ. 

ಖಾಸಗಿ ವಸತಿ ವಿದ್ಯಾಲಯವೊಂದರಲ್ಲಿ ಸೊರಬ ತಾಲೂಕಿನ ಶಿವಪುರದ ತೇಜಸ್ವಿನಿ (13) ಎಂಬ ಎಂಟನೆ ತರಗತಿ ವಿದ್ಯಾರ್ಥಿನಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬೆಳಗ್ಗೆ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಶಾಲಾ ವಾಹನದಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯ ಶವ ಪರೀಕ್ಷೆಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 

ವಿದ್ಯಾರ್ಥಿನಿ ಸಾವಿನ ಬಗ್ಗೆ ಮಾತನಾಡಿದ ಶಾಲಾ ಮುಖ್ಯಸ್ಥ ಎಚ್.ಪಿ.ಮಂಜಪ್ಪ, ಐದು ದಿನಗಳ ಹಿಂದೆ 8ನೇ ತರಗತಿಗೆ ತೇಜಸ್ವಿನಿ ಅವರನ್ನು ದಾಖಲಿಸಿಕೊಳ್ಳಲಾಗಿತ್ತು.  ವಿದ್ಯಾರ್ಥಿನಿ ಬಂದು ಐದು ದಿನವಾಗಿರುವುದರಿಂದ ಅವಳ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಬಳಿ ಇಲ್ಲ. ಸಾವಿಗೆ ನಿಖರ ಕಾರಣ ಏನೆಂದು ತಿಳಿದುಕೊಳ್ಳಲು ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ. ಪೊಲೀಸರ ತನಿಖೆಗೆ ನಮ್ಮ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಲೋಪವಾಗಿಲ್ಲ. ಪೋಸ್ಟ್‍ಮಾರ್ಟ ವರದಿ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. 

ತನಿಖೆಗೆ ಸೂಚನೆ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸ್ವಾಂತ್ವಾನ ಹೇಳಿ, 13 ವರ್ಷದ ಹೆಣ್ಣುಮಗಳು ಮೃತಪಟ್ಟಿರುವುದರಿಂದ ಪೋಷಕರು ಮತ್ತವರ ಸಂಬಂಧಿಕರು ತೀವೃ ದುಃಖದಲ್ಲಿದ್ದಾರೆ. ಪೋಷಕರು ಈ ಸಂಬಂಧ ಪ್ರಕರಣ ದಾಖಲಿಸುತ್ತೇವೆಂದು ತಿಳಿಸಿದ್ದಾರೆ. ಪೊಲೀಸರಿಗೆ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಪರಪ್ಪ  ಇನ್ನಿತರರು ಹಾಜರಿದ್ದರು.

Similar News