ತುಮಕೂರು | ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ ಬಳಿಕ 2 ತಿಂಗಳ ಮಗು ಮೃತ್ಯು; ಪೋಷಕರ ಆರೋಪ

ಹೊಯ್ಸಳಕಟ್ಟೆ ಸರಕಾರಿ ಆಸ್ಪತ್ರೆಗೆ ಮುತ್ತಿಗೆ; ವೈದ್ಯರ ಅಮಾನತಿಗೆ ಪಟ್ಟು

Update: 2023-06-08 14:41 GMT

ಹುಳಿಯಾರು,ಜೂ.08: ಸರಕಾರಿ ಆಸ್ಪತ್ರೆಯಲ್ಲಿ ಒಂದುವರೆಯಿಂದ ಎರಡು ತಿಂಗಳ ಮಗುವಿಗೆ ನೀಡುವ ಚುಚ್ಚುಮದ್ದು ಪಡೆದ ಬಳಿಕ ತನ್ನ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿದ ಘಟನೆ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ವರದಿಯಾಗಿದೆ.

ಸೋಮನಹಳ್ಳಿ ಗ್ರಾಮದ ಮಧು ಮತ್ತು ಶೃತಿ ದಂಪತಿಯ 2 ತಿಂಗಳ ಗಂಡು ಮಗು ಈ ಪ್ರಕರಣದಲ್ಲಿ ಸಾವನ್ನಪ್ಪಿದೆ. ಆಸ್ಪತ್ರೆಗೆ ಬರುವ ಮುನ್ನ ಆರೋಗ್ಯವಾಗಿದ್ದ ಮಗು ಚುಚ್ಚುಮದ್ದು ಪಡೆದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸಾವನ್ನಪ್ಪಿದೆ.ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಗುವಿನ ತಂದೆ ಮಧು ಆರೋಪಿಸಿದ್ದಾರೆ.

ಮಗು ಮೃತಪಟ್ಟ ಸುದ್ದಿ ತಿಳಿದ ಮೃತ ಮಗುವಿನ ಕುಟುಂಬಸ್ಥರು, ಗ್ರಾಮಸ್ಥರು, ಸಾರ್ವಜನಿಕರು ಆಸ್ಪತ್ರೆ ಮುಂದೆ ಜಮಾಯಿಸಿದರು. ವೈದ್ಯರು ಮತ್ತು ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಕೂಡಿ ಹಾಕಿ ವೈದ್ಯರು ಹಾಗು ಸಿಬ್ಬಂದಿ ವರ್ಗದವರನ್ನು ಆಮನತ್ತು ಮಾಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ  ಕೆಲಾಲ ಬಿಗುವಿನ ವಾತವರಣ ಸೃಷ್ಟಿಯಾಯಿತು.

''ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೇ ಪೋನ್ ಬಳಸುತ್ತಾರೆ. ಪ್ರತಿ ರೋಗಿಯ ಬಳಿ ಚಿಕಿತ್ಸೆ ನೀಡಲು 20 ರಿಂದ 100 ರೂ ವರೆಗೂ ಲಂಚ ಪಡೆಯುತ್ತಾರೆ, ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಾರೆ'' ಎಂದು ಪ್ರತಿಭಟನಾಕಾರರು ಆರೋಪಿಸಿದರು. ವೈದ್ಯರ ವಿರುದ್ದ ಧಿಕ್ಕಾರ ಕೂಗಿ, ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು.

ಘಟನೆಯ ಮಾಹಿತಿ ಪಡೆದ ಶಾಸಕ ಸಿ.ಬಿ.ಸುರೇಶ್‍ಬಾಬು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಗು ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಆರ್.ಮೋಹನ್ ಸ್ಥಳಕ್ಕೆ ಭೇಟಿ ನೀಡಿ,ಈಗಿರುವ ವೈದ್ಯ ಮಧು ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬದಲಾಯಿಸಿ ವೈದ್ಯ ಸ್ವರೂಪ್‍ರನ್ನು ನಿಯೋಜಿಸಲಾಗಿದೆ. ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗುತ್ತಾರೆ ಹಾಗು ಒಬ್ಬ ಆಶಾ ಕಾರ್ಯಕರ್ತರನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

''ದೇಶಾದ್ಯಂತ ಸಣ್ಣ ಮಕ್ಕಳಿಗೆ ಅನೇಕ ಚುಚ್ಚುಮದ್ದು ನೀಡಲಾಗುತ್ತಿದೆ. ಎಲ್ಲಿಯೂ ಚುಚ್ಚುಮದ್ದು ಪಡೆದು ಮಕ್ಕಳು ಸಾವನ್ನಪ್ಪಿದ ವರದಿಯಾಗಿಲ್ಲ. ಅಲ್ಲದೆ ಅದರಿಂದ ಸಣ್ಣ ತೊಂದರೆಯಾದ ನಿದರ್ಶನವೂ ಇಲ್ಲ. ಗುರುವಾರ ಒಂದೇ ದಿನ 10 ಮಂದಿಗೆ ಚುಚ್ಚುಮದ್ದು ಕೊಡಲಾಗಿದೆ.ಚುಚ್ಚುಮದ್ದು ಪಡೆದ ಇತರ ಮಕ್ಕಳು ಆರೋಗ್ಯದಿಂದಿದ್ದಾರೆ.ಈ ಮಗು ಸಾವನ್ನಪ್ಪಿರುವ ಸುದ್ದಿ ಆಶ್ಚರ್ಯವಾಗಿದೆ. ಸೋಮನಹಳ್ಳಿಯ ಮಗು ಹೇಗೆ ಸಾವನ್ನಪ್ಪಿದೆ ಎಂಬುದು ಶವಪರೀಕ್ಷೆಯ ನಂತರವಷ್ಟೆ ತಿಳಿಯಲಿದೆ''

- ಡಾ.ಸಿ.ಆರ್.ಮೋಹನ್- ತಾಲೂಕು ವೈದ್ಯಾಧಿಕಾರಿ 

Similar News