×
Ad

ಕೆಎಸ್ಸಾರ್ಟಿಸಿ ನಷ್ಟದಲ್ಲಿದ್ದರೂ ಶಕ್ತಿ ಯೋಜನೆ ಮೂಲಕ ಸರಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ: ಭೋಜೇಗೌಡ ಶ್ಲಾಘನೆ

Update: 2023-06-11 22:23 IST

ಚಿಕ್ಕಮಗಳೂರು: ಕೆಎಸ್ಸಾರ್ಟಿಸಿ ಸಂಸ್ಥೆ ನಷ್ಟದಲ್ಲಿದ್ದರೂ ಸಿಎಂ ಸಿದ್ದರಾಮಯ್ಯ ಸರಕಾರ ದಿಟ್ಟತನ ಪ್ರದರ್ಶಿಸುವ ಮೂಲಕ ಸರಕಾರಿ ಬಸ್‍ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಭರವಸೆಯನ್ನು ಈಡೇರಿಸುವ ಮೂಲಕ ಜನಪರ ನಿಲುವ ಪ್ರದರ್ಶಿಸಿದೆ. ಸರಕಾರದ ಈ ದಿಟ್ಟ ನಿಲುವನ್ನು ಪಕ್ಷಾತೀತವಾಗಿ ಎಲ್ಲರೂ ಶ್ಲಾಘಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅಭಿಪ್ರಾಯಿಸಿದರು.

ರವಿವಾರ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಆಯೋ ಜಿಸಿದ್ದ ರಾಜ್ಯ ಸರಕಾರದ ನೂತನ ಶಕ್ತಿ ಯೋಜನೆಗೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ಜಾತಿ, ಮತ, ಧರ್ಮ, ಮೇಲು, ಕೀಳು, ಬಡವ, ಶ್ರೀಮಂತ ಎನ್ನದೇ ಸರಕಾರಿ ಬಸ್‍ಗಳಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣದ ಯೋಜನೆ ಘೋಷಣೆ ಮಾಡಿರುವುದಲ್ಲದೇ ಅದನ್ನು ಜಾರಿ ಮಾಡುತ್ತಿರುವುದು ಸರಕಾರದ ಮಾದರಿ ಕೆಲಸವಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯನ್ನು ರಾಜ್ಯ ಸರಕಾರ ಇಷ್ಟು ಬೇಗನೆ ಜಾರಿ ಮಾಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಸರಕಾರ ಈ ನಿಟ್ಟಿನಲ್ಲಿ ದಿಟ್ಟ ನಿಲುವು ಕೈಗೊಂಡಿದೆ ಎಂದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಂದಿಗೂ ಕೂಡ ನಷ್ಟದಲ್ಲಿದೆ. ಚಾಲಕರು ಮತ್ತು ನಿರ್ವಾಹಕರು ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿದ್ದನ್ನು ಎಲ್ಲರೂ ಕಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದೆ. ಇದಕ್ಕಾಗಿ ಕೋಟ್ಯಾಂತರ ಹಣವನ್ನು ಸರಕಾರ ವ್ಯಯಿಸಬೇಕಾಗಿದ್ದು, ಆ ಹಣವನ್ನು ಸಂಸ್ಥೆಯ ಬೊಕ್ಕಸಕ್ಕೆ ತುಂಬುವ ಜವಬ್ದಾರಿಯೂ ಸರಕಾರದ ಮೇಲಿದ್ದು, ಸರಕಾರ ಇದಕ್ಕಾಗಿ ಅಗತ್ಯ ಕ್ರಮವಹಿಸಿರುವುದು ಸರಕಾರ ದೂರದೃಷ್ಟಿ ನಿಲುವಿಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಡಿ ತಮ್ಮಯ್ಯ, ರಾಜ್ಯ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ ಈಗಾಗಲೇ ಮೂರು ಗ್ಯಾರೆಂಟಿಗಳನ್ನು ಘೋಷಣೆ ಸರಕಾರ ಜಾರಿ ಮಾಡಿದೆ. ಸದ್ಯ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಶೀಘ್ರದಲ್ಲೇ ಉಳಿದ ಎರಡು ಘೋಷಣೆಗಳೂ ಅನುಷ್ಠಾನಗೊಳ್ಳಿವೆ ಎಂದ ಅವರು, ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದಾರೆ. ಅದೇ ಮಾದರಿಯಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಲಿದೆ. ರೈತರು, ಕಾರ್ಮಿಕರು, ಬಡವರ ಕಲ್ಯಾಣ ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಶಕ್ತಿ ಯೋಜನೆ ಮೂಲಕ ರಾಜ್ಯ ಸರಕಾರ ಮಹಿಳೆಯರ ಸಬಲೀಕರಣಕ್ಕೆ ದಿಟ್ಟವಾದ ಹೆಜ್ಜೆ ಇಟ್ಟಿದ್ದು, ರಾಜ್ಯ ಸರಕಾರ ಈ ಕಾರ್ಯ ಶ್ಲಾಘನೀಯ ಎಂದ ಅವರು, ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆಯರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಕ್ತಿ ಯೋಜನೆಗೆ ಚಾಲನೆ ನೀಡಿದ ಶಾಸಕ ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ ಏರಿ ಬಸ್‍ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್‍ಗಳನ್ನು ವಿತರಿಸಿದರು. ಟಿಕೆಟ್ ಟಿಕೆಟ್ ಎನ್ನುತ್ತ ಮಹಿಳೆಯರ ಬಳಿಗೆ ತೆರಳಿದ ಶಾಸಕ ತಮ್ಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಟಿಕೆಟ್‍ಗಳನ್ನು ವಿತರಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿದರು. ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

Similar News