ಮುಸ್ಲಿಮರು ಬಿಜೆಪಿಯಿಂದ ಹಣ ಪಡೆದು ಮೋಸ ಮಾಡಿದರು: ಎಂಟಿಬಿ ನಾಗರಾಜ್ ಹೇಳಿಕೆ ವೈರಲ್
''ಇನ್ನು ಮುಂದೆ ಆ ಸಮುದಾಯವನ್ನು ಭಯ ಪಡುವ ಪ್ರಶ್ನೆಯೇ ಇಲ್ಲ''
ಬೆಂಗಳೂರು: 'ಮುಸ್ಲಿಮರಲ್ಲಿ ಕೆಲವರು ಕುರಾನ್ ಮತ್ತು ಅಲ್ಲಾಹನ ಮೇಲೆ ವಾಗ್ದಾನ ಮಾಡಿ ನನಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹಣ ತೆಗೆದುಕೊಂಡರು. ಆದರೆ, ಕಾಂಗ್ರೆಸ್ಗೆ ಮತ ನೀಡಿದರು' ಎಂದು ಮಾಜಿ ಸಚಿವ, ಹೊಸಕೋಟೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದ್ದ ಆತ್ಮಾವಲೋಕನಾ ಸಭೆಯಲ್ಲಿ ಅವರು ಮಾತನಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ.
''ನೀವು ಕಾಂಗ್ರೆಸ್ಗೆ ಮತ ಹಾಕಬಹುದು. ಅದು ಬೇರೆ ಪ್ರಶ್ನೆ. ಆದರೆ ನಮ್ಮ ಜನರು ನಿಮಗೆ ನೀಡಿದ ವಸ್ತುಗಳನ್ನು ಮತ್ತು ಹಣವನ್ನು ಹೇಗೆ ತೆಗೆದುಕೊಂಡಿರಿ'' ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು ಚುನಾವಣೆಗಳಲ್ಲಿ ನನಗೆ ಓಟ್ ಹಾಕದೇ ಮೋಸ ಮಾಡಿದ್ರಿ, ಈ ಸಲ ನಾನು ನಿಮ್ಮನ್ನ ನಂಬಿದ್ದೆ. ಆದ್ರೆ, ನಂಬಿಸಿ ಮಾತು ಕೊಟ್ಟು ನನಗೆ ಮೋಸ ಮಾಡಿದ್ರಿ. ಇಷ್ಟು ದಿನ ಸಮುದಾಯ ಪಕ್ಷಾಂತರ ಆಗುತ್ತೆ ಅಂತ ಭಯ ಪಟ್ಟಿದ್ದಾಯ್ತು. ಇನ್ಮುಂದೆ ಭಯ ಪಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.