ಪರಿಷತ್ 3 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲೋದು ಖಚಿತ, ಆದರೂ ನಾವು ಸ್ಪರ್ಧಿಸುತ್ತೇವೆ ಎಂದ ಬೊಮ್ಮಾಯಿ
ಹುಬ್ಬಳ್ಳಿ, ಜೂ.13: ''ವಿಧಾನ ಪರಿಷತ್ ಚುನಾವಣೆಯ ಮೂರೂ ಸ್ಥಾನಗಳಿಗೆ ನಾವು ಸ್ಪರ್ಧಿಸುತ್ತೇವೆ. ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಆದರೂ ಪ್ರತಿಪಕ್ಷವಾಗಿ ಸ್ಪರ್ಧಿಸುತ್ತೇವೆ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮುಂಗಾರು ಮಳೆ ತಡವಾಗಿದ್ದರಿಂದ ಬಿತ್ತನೆ ತಡವಾಗಿದೆ. ಸಕಾಲಕ್ಕೆ ಮುಂಗಾರು ಮಳೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಇದೆ. ಹೀಗಿದ್ದರೂ ಮುಖ್ಯಮಂತ್ರಿ ಇವುಗಳನ್ನು ನಿಭಾಯಿಸಲು ಯಾವುದೆ ರೀತಿ ಸನ್ನದ್ಧವಾಗಿಲ್ಲ'' ಎಂದು ದೂರಿದರು.
''ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಯಾವುದೆ ಜವಾಬ್ದಾರಿ ಇಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲಾಶಯಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ'' ಎಂದರು.
''ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ ಸಹಕಾರ ಪಡೆಯಬೇಕು. ಈ ಕೂಡಲೆ ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಎನ್ಡಿಆರ್ಎಫ್ ತಂಡಗಳನ್ನು ಚುರುಕುಗೊಳಸಬೇಕು. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಿದೆ'' ಎಂದು ಅವರು ಹೇಳಿದರು.
''ಗ್ಯಾರಂಟಿ ಬಗ್ಗೆ ಕಾದುನೋಡುವ ತಂತ್ರ ನಮ್ಮದಾಗಿದೆ. ಉಚಿತ ಬಸ್ ಪಾಸ್ ಆರಂಭದ ಶೂರತ್ವವನ್ನು ಸರಕಾರ ತೋರಿಸುತ್ತಿದೆ. ಗ್ಯಾರಂಟಿ ರೂಪದಲ್ಲಿ ಮಹಿಳೆಯರಿಗೆ ಉಚಿತ ನೀಡುವ ಸಲುವಾಗಿ ಅವರಿಗೆ ಸಮರ್ಪಕ ಪ್ರಯಾಣ ಇಲ್ಲದಂತೆ ಆಗುತ್ತಿದೆ'' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
''ರಾಜ್ಯದಲ್ಲಿ ಬಸ್ ಗಳ ಸಮಸ್ಯೆ ಆಗುತ್ತಿದೆ. ಈಗಾಗಲೇ ನಾವು ಡೀಸೆಲ್ ಅನುದಾನ ಬಿಡುಗಡೆ ಮಾಡಿದ್ದೇವೆ. ಅದನ್ನು ಮುಂದುವರೆಸಬೇಕು. ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರಕಾರ ಮುಂದಾಗಿದೆ'' ಎಂದು ಅವರು ತಿಳಿಸಿದರು.
ಅಧಿವೇಶನದ ವೇಳೆ ವಿಪಕ್ಷ ನಾಯಕನ ಆಯ್ಕೆ: ನಾನು ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿ ಅಲ್ಲ. ಅಧಿವೇಶನ ಕರೆದ ಕೂಡಲೆ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯುತ್ತೆ. ಪ್ರತಿ ಬಾರಿ ನಡೆಯುವ ಸಂಪ್ರದಾಯ ಇದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.