×
Ad

ಜೇವರ್ಗಿ ಹೆಡ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಮೂವರು ಪೊಲೀಸರ ಅಮಾನತು

Update: 2023-06-18 12:19 IST

ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಮರಳು ದಂಧೆಕೋರರಿಂದ ಹೆಡ್ ಕಾನ್ಸ್ಟೆಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಎಸ್.ಪಿ ಇಶಾ ಪಂತ್ ಶನಿವಾರ ಆದೇಶ ಹೊರಡಿಸಿದ್ದಾರೆ.

ಜೇವರ್ಗಿ ಠಾಣೆಯ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್ಐ ಗೌತಮ್ ಗುತ್ತೆದಾರ್ ಮತ್ತು ಕಾನ್ಸ್ಟೆಬಲ್ ರಾಜಶೇಖರ ಎಂಬುವರನ್ನು ಅಮಾನತು ಮಾಡಲಾಗಿದ್ದು, ಜೇವರ್ಗಿ ತಾಲೂಕಿನ ಹುಲ್ಲೂರ್ ಬಳಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆದರೂ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿರಲಿಲ್ಲ. ದಂಧೆಕೋರರು ಪ್ರತಿನಿತ್ಯ ಹುಲ್ಲೂರ್ ಸ್ಟಾಕ್ ಯಾರ್ಡ್ನಿಂದ ಅಕ್ರಮವಾಗಿ ಮರಳು ಪೂರೈಕೆ ಮಾಡುತ್ತಿದ್ದರು. ನೆಲೋಗಿ ಪಿಎಸ್ಐ ಗೌತಮ್ ಕೂಡ ಸ್ಪಾಟ್ ವಿಸಿಟ್ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.

ಜೂನ್ 15 ರಂದು ನೆಲೋಗಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಯೂರ್ ಚೌಹಾಣ್ ಮರಳು ದಂಧೆ ತಡಯಲು ಹೋದಾಗ ಅವರ ಮೇಲೆ ದಂಧೆಕೋರರು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದರು. ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಮೂವರು ಸಿಬ್ಬಂದಿಯನ್ನು ಎಸ್ಪಿ ಸಸ್ಪೆಂಡ್ ಮಾಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Similar News