×
Ad

ಹಾಸನ | ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ: ವೀಡಿಯೊ ವೈರಲ್

Update: 2023-06-18 15:28 IST

ಹಾಸನ : ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಳೇನರಸೀಪುರ ತಾಲೂಕಿನ, ಮಳಲಿ ದೇವಸ್ಥಾನದ ಬಳಿ ಶನಿವಾರ ವರದಿಯಾಗಿದೆ.

ಸಕಲೇಶಪುರ ತಾಲೂಕು ಯಸಳೂರು ಪೊಲೀಸ್ ಠಾಣೆಯ ಶರತ್ ಹಲ್ಲೆಗೊಳಗಾದ ಕಾನ್ಸ್‌ ಟೇಬಲ್ ಅಗಿದ್ದಾರೆ. ಇವರು ಹೊಳೆನರಸೀಪುರ ತಾಲೂಕಿನ ಕುಂದೂರು ಹೋಬಳಿ ಎಸ್.ಹೊನ್ನೇನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.

ಇವರು ಜೂ.15 ರಂದು ಸಾಂದರ್ಭಿಕ ರಜೆ ಪಡೆದು ಸ್ನೇಹಿತನ ಮಗಳ ಹುಟ್ಟಹಬ್ಬದ ಕಾರ್ಯಕ್ರಮಕ್ಕೆಂದು ಮಳಲಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಸನ್ ಹಾಲ್ ಮುಂಭಾಗ ಗ್ರಾಮದ ಯುವಕರ ಗುಂಪೊಂದು ಚೇತನ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿದ್ದಾಗ ಈ ವೇಳೆ ಜಗಳ ಬಿಡಿಸಲು ಶರತ್ ಹೋಗಿದ್ದಾರೆನ್ನಲಾಗಿದೆ. ಈ ವೇಳೆ ಶರತ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಿಥುನ್, ಲೋಹಿತ್, ನಟರಾಜು ಹಾಗೂ ಇತರರು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನಲ್ಲಿದ್ದ ಮಾರಕಾಸ್ತ್ರವನ್ನು ತಂದು ಶರತ್ ಮೇಲೆ ಮುಗಿಬಿದ್ದಿದ್ದಾರೆ.

ಗುಂಪಿನಿಂದ ತಪ್ಪಿಸಿಕೊಂಡ ಶರತ್, ತಕ್ಷಣ ಕನ್ವೆನ್ಷನ್ ಹಾಲ್ ಒಳಗ ಓಡಿ ಹೋಗಿದ್ದಾರೆ. ನಂತರ ಅಲ್ಲಿಗೂ ತೆರಳಿದ ಗುಂಪು ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ನಡೆಸಿದೆ. ಪರಿಣಾಮ ಹಾಲ್‌ನಲ್ಲೇ ಕಾನ್ಸ್‌ಟೇಬಲ್ ಶರತ್ ಕುಸಿದು ಬಿದ್ದಿದ್ದಾರೆ. ಈ ಕುರಿತ ಸಿಸಿ ಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಸದ್ಯ ಶರತ್ ಅವರು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಪಡೆಯುತ್ತಿದ್ದು, ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Similar News