ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಪಠ್ಯದಲ್ಲಿ ಸೇರಿಸುವಂತೆ ಎಸ್ಎಫ್ಐ ಒತ್ತಾಯ
ಬೆಂಗಳೂರು, ಜೂ.18: ರಾಜ್ಯ ಸರಕಾರ ಪಠ್ಯದಲ್ಲಿ ದೇವನೂರು ಮಹಾದೇವರವರ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಸೇರ್ಪಡೆ ಮಾಡಿ, ಆದೇಶ ಹೊರಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಆಗ್ರಹಿಸಿದೆ.
ರಾಜ್ಯ ಸರಕಾರವು ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ತಿದ್ದುಪಡಿ ಮತ್ತು ಸೇರ್ಪಡೆಗೊಳಿಸಲು ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದೆ. ಹಾಗೆಯೇ ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಸೇರಿಸಲು ಸಂಘಟನೆ ಆಗ್ರಹಿಸಿದೆ.
ಹಿಂದಿನ ವರ್ಷ ಬಿಜೆಪಿ ಸರಕಾರ ಆರರಿಂದ ಹತ್ತನೇ ತರಗತಿವರೆಗೆ ಕೆಲವು ಪಾಠಗಳನ್ನು ತಿದ್ದುಪಡಿ, ಸೇರ್ಪಡೆ ಮಾಡುವುದರ ಮೂಲಕ ಪಠ್ಯ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳ ಮನಸ್ಸಿನೊಳಗೆ ಕೋಮು ಭಾವನೆಯ ವಿಷ ಬೀಜ ಬಿತ್ತಲು ಪ್ರಯತ್ನಿಸಿತ್ತು. ಮಹಿಳೆಯರು ಕೇವಲ ಭೋಗದ ವಸ್ತು ಹಾಗೂ ಮನೆ ಕೆಲಸಕ್ಕೆ ಸೀಮಿತ ಎಂಬ ಅರ್ಥದಲ್ಲಿ ಇರುವಂತ ಕೆಲವು ಪಾಠವನ್ನು ಸೇರಿಸಿತ್ತು. ಇದನ್ನು ಸರಿಪಡಿಸಿ, ಸುತ್ತೋಲೆ ಹೋರಡಿಸಿರುವುದು ಸ್ವಾಗತಾರ್ಹ ಎಂದು ಸಂಘಟನೆ ತಿಳಿಸಿದೆ.
ಬಿಜೆಪಿ ಸರಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲ ಪಾಠಗಳನ್ನು ಇಂದಿನ ಕಾಂಗ್ರೆಸ್ ಸರಕಾರ ಮರುಸೇರ್ಪಡೆ ಮಾಡಿದೆ. ಆದರೆ 10ನೆ ತರಗತಿ ಪ್ರಥಮ ಭಾಷೆಯಾದ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರು ಮಹಾದೇವರ "ಎದೆಗೆ ಬಿದ್ದ ಅಕ್ಷರ" ಎಂಬ ಪಾಠವು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ತಿದ್ದೋಲೆಯಲ್ಲಿ ಇಲ್ಲದಿರುವುದು ನೋವಿನ ವಿಷಯ ಆಗಿದೆ ಎಂದು ಸಂಘಟನೆ ತಿಳಿಸಿದೆ.
‘ಎದೆಗೆ ಬಿದ್ದ ಅಕ್ಷರ’ ಪಾಠವು ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಹಿಂದೆ ಬಿಜೆಪಿ ಸರಕಾರದ ಕೋಮುವಾದದ ವಿರುದ್ಧ ದೇವನೂರು ಮಹಾದೇವ ಬಹಿರಂಗವಾಗಿ ಪ್ರತಿಭಟನೆಯನ್ನು ಮಾಡಿದ್ದರು. ತಮ್ಮ ಪುಸ್ತಕವಾದ ಎದೆಗೆ ಬಿದ್ದ ಅಕ್ಷರ ಭಾಗವನ್ನು ಗದ್ಯಭಾಗದಲ್ಲು ಪ್ರಕಟಿಸಲು ನೀಡಿದ್ದ ಅನುಮತಿ ವಾಪಸ್ಸು ಪಡೆದಿದ್ದರು.
ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಗಮನಹರಿಸಿ 10ನೆ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಸೇರ್ಪಡೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷ ಅಮರೇಶ ಕಡಗದ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.